
ಗೋಪಾಲಸ್ವಾಮಿ ಬೆಟ್ಟದಕ್ಕೆ ಹರಿದು ಬಂದ ಜನ ಸಾಗರ
ಗುಂಡ್ಲುಪೇಟೆ: ಹೊಸವರ್ಷದ ಆರಂಭದ ದಿನವೇ ತಾಲೂಕಿನ ಹಿಮವದ್ ಗೋಪಾಲ ಸ್ವಾಮಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ಪ್ರವಾಸಿಗರು ಸೇರಿದಂತೆ ಭಕ್ತರು ತಮ್ಮ ಕುಟುಂಬ ಸಮೇತ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದರಿಂದ ಎಲ್ಲೆಂದರೆ ಬರೀ ಜನರೇ ಕಂಡು ಬಂದರು.
ಗೋಪಾಲ ಸ್ವಾಮಿ ಬೆಟ್ಟ, ಬಂಡೀಪುರ, ಹುಲಗನ ಮುರುಡಿ ಹಾಗೂ ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದರೆ, ಎಲ್ಲ ರಸ್ತೆಗಳು ಕಿಮೀ ಉದ್ದದ ಸರದಿ ಸಾಲು. ದೇವರ ದರ್ಶನ ಪಡೆಯಲು ರಾಜ್ಯ ಹೊರ ರಾಜ್ಯಗಳಿಂದ ಬೆಳಗಿನ 6 ಗಂಟೆಯಿಂದಲೇ ಭಕ್ತರು ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ವಾಹನ ಸಂಚಾರದ ದಟ್ಟಣೆ ಹೆಚ್ಚಾಗಿತ್ತು.
ಗೋಪಾಲಸ್ವಾಮಿಬೆಟ್ಟದಲ್ಲಿ ಭಕ್ತ ಸಮೂಹ ದರ್ಶನ ಪಡೆಯಲು ಕಾತರರಾಗಿ ಸುಮಾರು 1 ಕಿಮೀ ಉದ್ದದ ಸರತಿ ಸಾಲಲ್ಲಿ ನಿಂತು ಇಷ್ಟಾರ್ಥ ಸಿದ್ದಿ ಪ್ರದಾಯಕನ ದರ್ಶನ ಪಡೆಯುವುದರೊಂದಿಗೆ ಹಿಂದಿನ ವರ್ಷದ ಹೊತ್ತ ಹರಕೆ ಈಡೇರಿದ್ದರಿಂದ ಧನ್ಯತಾ ಭಾವದಿಂದ ಹರಕೆ ಸಮರ್ಪಿಸಿದರೆ, ಹೊಸದಾಗಿ ಬಂದವರು ತಮ್ಮ ಇಷ್ಠಾರ್ಥ ಪೂರೈಸುವಂತೆ ಹರಕೆ ಹೊತ್ತು ಭಕ್ತಿಯಿಂದ ನಮಿಸುತ್ತಿದ್ದ ದೃಶ್ಯ ಕಂಡು ಬಂದಿತು. ಉರಿ ಬಿಸಿಲಿನ ಸರದಿಯಲ್ಲಿ ನಿಂತ ಭಕ್ತರಿಗೆ ಪಟ್ಟಣದ ನಾನಾ ಯುವಕರು ನೀರು, ಪುಳಿಯೋಗರೆ ಹಾಗೂ ಬಾತ್ ವಿತರಿಸಿದರು.