
ಗ್ಯಾರಂಟಿಗಳ ಡಂಗುರ ಹೊಡೆದವರು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸಿಟಿ ರವಿ
ಮಂಗಳೂರು: ಮೋದಿಯವರು 9 ವರ್ಷಗಳಲ್ಲಿ ಹಲವು ಯೋಜನೆಗಳನ್ನು ಜಾರಿಗಳಿಸಿದ್ದು, ಯಾವುದನ್ನೂ ಟಾಂಟಾಂ ಹೊಡೆದಿಸಲ್ಲ. ಅಗತ್ಯವಿರುವವರನ್ನು ಗುರುತಿಸಿಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ಅಕ್ಕಿಯ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಚುನಾವಣೆಗೆ ಮುನ್ನ ಗ್ಯಾರಂಟಿಗಳ ಡಂಗುರ ಹೊಡೆದವರು, ಈಗ ಯಾಕೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಪ್ರಧಾನಿಯವರ ಒಪ್ಪಿಗೆ ಪಡೆದು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ತನ್ನ ಪಾಲಿನ 5 ಕೆ.ಜಿ ಅಕ್ಕಿಯನ್ನು ಕೊಡುತ್ತಲೇ ಇದೆ. ಆದರೆ ಮುಂಗಾರು ಮಳೆಯ ಕೊರತೆಯನ್ನು ಗಮನಿಸಿ, ಕೇಂದ್ರ ಸರಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ ಕೆಲವೊಂದು ನಿರ್ಣಯಗಳನ್ನು ಕೈಗೊಂಡಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ಸರಕಾರಗಳೂಅಕ್ಕಿಗೆ ಬೇಡಿಕೆ ಇಟ್ಟಿವೆ. ಅವರಿಗೂ ಕೇಂದ್ರ ಸರಕಾರ ಕೊಟ್ಟಿಲ್ಲ ಎಂದರು.
ಕೇಂದ್ರ ಸರಕಾರ ಸರ್ವರ್ ಹ್ಯಾಕ್ ಮಾಡಿದೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಲ್ಪ ದಿನ ಕಳೆದರೆ ನಮ್ಮ ಮೈಂಡ್ ಕೂಡಾ ಹ್ಯಾಕ್ ಮಾಡಿದ್ದಾರೆ ಹಾಗಾಗಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದೇವೆ ಎಂದು ಹೇಳುವ ಸಾಧ್ಯತೆಯೂ ಇದೆ ಎಂದರು.
ಕೇಂದ್ರ ಸರಕಾರದ 9 ವರ್ಷಗಳ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ 7 ತಂಡಗಳಲ್ಲಿ ರಾಜ್ಯ-ಕೇಂದ್ರ ಮುಖಂಡರು ರಾಜ್ಯದ ವಿವಿಧೆಡೆ ತೆರಳಿ ಜುಲೈ 30ರ ವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ಎಂದರು.
ರಾಜ್ಯದಲ್ಲಿ ಬಿಜೆಪಿಗೆ ಓಟ್ ಕಡಿಮೆಯಾಗಿ ಅಧಿಕಾರ ಕಳೆದುಕೊಂಡಿಲ್ಲ. ಆದರೆ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಹೀನಾಯ ಸೋಲು ಅಲ್ಲ. ಪ್ರತಾಪಸಿಂಹ, ಯೋಗೀಶ್ವರ್ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮುಖಂಡರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆಗರ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕೇಶವ ಪ್ರಸಾದ್, ವೇದವ್ಯಾಸ ಕಾಮತ್, ಉದಯಕುಮಾರ್ ಶೆಟ್ಟಿ, ಸುದರ್ಶನ ಎಂ. ಉಪಸ್ಥಿತರಿದ್ದರು.