
ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿ ಧರ್ಮರಾಜಕಾರಣಕ್ಕೆ ಮುಂದಾಗಿದೆ – ಧ್ರುವನಾರಾಯಣ್
ಕುಂದಾಪುರ: ಧರ್ಮದ ಆಧಾರ ಮೇಲೆ ಒಮ್ಮೆ ಮತವನ್ನು ಗಿಟ್ಟಿಸಿಕೊಳ್ಳಬಹುದು. ಬಣ್ಣ ಬಯಲಾದ ಮೇಲೆ ಅದೇ ಅಜೆಂಡಾವನ್ನು ಇಟ್ಟುಕೊಂಡು ಮತ್ತೆ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಹಿಂದೂಗಳು, ನಾವೂ ಕೂಡ ದೇವರನ್ನು ಪೂಜಿಸುತ್ತೇವೆ. ಧರ್ಮ, ಜಾತಿ ಮೇಲಿನ ರಾಜಕಾರಣ ಅಲ್ಪಾವಧಿ ಮಾತ್ರ. ಕೊನೆಗೆ ಶಾಶ್ವತವಾಗಿ ಉಳಿಯುವುದು ಅಭಿವೃದ್ದಿ ರಾಜಕಾರಣ ಒಂದೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದರು.
ಅವರು ಸೋಮವಾರ ಕೊಲ್ಲೂರಿನಲ್ಲಿ ನಡೆದ ವಂಡ್ಸೆ ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿ ಧರ್ಮರಾಜಕಾರಣಕ್ಕೆ ಮುಂದಾಗಿದೆ. ಅಭಿವೃದ್ಧಿ ಕೆಲಸಗಳನ್ನೇ ಮಾಡದ ಬಿಜೆಪಿಗೆ ಸಾವರ್ಕರ್ ಹೆಸರೇ ಅಸ್ತ್ರವಾಗಿದೆ. ಅಭಿವೃದ್ದಿ ಕೆಲಸಗಳ ಪಟ್ಟಿ ಮಾಡಲು ಬಿಜೆಪಿಗೆ ಹೆಸರೇ ಸಿಗುತ್ತಿಲ್ಲ. ಹಾಗಾಗಿ ಸಾವರ್ಕರ್ ಅದೂ ಇದು ಅಂತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಬಿಜೆಪಿ ಬಣ್ಣದ ಮಾತುಗಳನ್ನಾಡಿ ಜನರನ್ನು ಮರಳು ಮಾಡಲು ಯತ್ನಿಸುತ್ತಿದೆ. ಆದರೆ ಇದೆಲ್ಲ ನಡೆಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಧ್ರುವನಾರಾಯಣ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತಾಪಚಂದ್ರ ಶೆಟ್ಟಿ ನಮ್ಮ ಪಕ್ಷದ ಹಿರಿಯ ಮುಖಂಡರು. ಅವರು ಭಾರತ್ ಜೋಡೋ, ಸ್ವತಂತ್ರ ನಡಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ಸಭೆಗಳಲ್ಲಿ ಅವರು ಹಾಜರಾಗಿಲ್ಲ. ಅವರು ಹಿರಿಯ ಮುಖಂಡರು, ರಾಜಕೀಯದಲ್ಲಿ ಅಪಾರವಾರ ಅನುಭವವುಳ್ಳವರು. ಅವರ ಮಾರ್ಗದರ್ಶನದಲ್ಲಿ ಈ ಜಿಲ್ಲೆಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.