ಛತ್ತೀಸ್ ಘಡದಲ್ಲಿ ಬಂಧಿತ ಕ್ರೈಸ್ತ ಧರ್ಮಭಗಿನಿಯರನ್ನು ಕೂಡಲೇ ಬಿಡುಗಡೆಗೊಳಿಸಿ – ಪ್ರೀತಿ ಸಾಲಿನ್ಸ್
ಉಡುಪಿ: ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಸುಳ್ಳು ಆರೋಪ ಹೊರಿಸಿ ಛತ್ತೀಸ್ಗಢದಲ್ಲಿ ಬಂಧಿಸಿರುವ ಕ್ರಮ ಖಂಡನೀಯವಾಗಿದ್ದು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೀತಿ ಸಾಲಿನ್ಸ್ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ತ್ರಿಶೂರು ಮೂಲದ ಕ್ರೈಸ್ತ ಸನ್ಯಾಸಿನಿಯರಾದ ವಂದನ ಫ್ರಾನ್ಸಿಸ್ ಮತ್ತು ಪ್ರೀತಿ ಮೇರಿ ಅವರನ್ನು ಮೂವರು ಯುವತಿಯರು ಹಾಗೂ ಓರ್ವ ಯುವಕನೊಂದಿಗೆ ಪ್ರಯಾಣಿಸುತ್ತಿದ್ದಾಗ ಮತಾಂತರ, ಮಾನವ ಕಳ್ಳ ಸಾಗಾಣಿಕೆಯ ಸುಳ್ಳು ಆರೋಪ ಹೊರಿಸಿ ಬಂಧಿಸಿರುವುದು ಧಾರ್ಮಿಕ ಹಾಗೂ ಮಾನವ ಹಕ್ಕುಗಳ ಕಗ್ಗೊಲೆಯಾಗಿದೆ.
ಹಲವಾರು ವರ್ಷಗಳಿಂದ ಕ್ರೈಸ್ತ ಸಮುದಾಯ, ಕ್ರೈಸ್ತ ಧರ್ಮಗುರುಗಳು, ಧರ್ಮಭಗಿನಿಯರು ತಮ್ಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಆಶ್ರಮಗಳ ಮೂಲಕ ಜಾತಿಭೇದವನ್ನು ಲೆಕ್ಕಿಸದೆ ತಮ್ಮ ಸೇವೆಗಳನ್ನು ನೀಡುತ್ತಿದ್ದಾರೆ. ಧರ್ಮಭಗಿನಿಯರು ತಮ್ಮ ಮನೆ ಮಠಗಳನ್ನು ತೊರೆದು ಗುಡ್ಡಗಾಡಿನಂತಹ ದುರ್ಗಮ ಪ್ರದೇಶದಲ್ಲಿ ನಿರ್ಗತಿಕರ ಸೇವೆಗೆ ತಮ್ಮ ಜೀವನವನ್ನು ಮೀಸಲಾಗಿರಿಸಿದ್ದಾರೆ. ಇಂತಹ ಸೇವಾ ಮನೋಭಾವನೆಯ ವ್ಯಕ್ತಿಗಳ ಮೇಲೆ ಸುಳ್ಳು ಆರೋಪ ಹೊರಿಸಿರುವುದು ಖಂಡನೀಯ.
ಸದಾ ಮಹಿಳೆಯರ ಸುರಕ್ಷತೆಯ ಕುರಿತು ಭಾಷಣ ಮಾಡುವ ಬಿಜೆಪಿಯ ನಾಯಕರುಗಳು ಛತ್ತೀಸ್ ಘಢದಲ್ಲಿ ಧರ್ಮಭಗಿನಿಯರನ್ನು ಅನಾಗರಿಕವಾಗಿ ನಡೆಸಿಕೊಂಡ ಬಲಪಂಥೀಯ ಸಂಘಟನೆಗಳ ಮೇಲೆ ಯಾವುದೇ ರೀತಿಯ ಪ್ರಕರಣವಾಗಿ ಬಂಧನವಾಗಲಿ ನಡೆಸದಿರುವುದು ಆಘಾತಕಾರಿ ಸಂಗತಿಯಾಗಿದೆ. ಬಂಧನವಾಗಿ ಇಷ್ಟು ದಿನಗಳು ಕಳೆದರೂ ಕೂಡ ಧರ್ಮಭಗಿನಿಯರಿಗೆ ಅಲ್ಲಿನ ನ್ಯಾಯಾಲಯಗಳಲ್ಲಿ ಜಾಮೀನು ಕೂಡ ದೊರೆಯದಿರುವುದು ಕಳವಳಕಾರಿ ಸಂಗತಿಯಾಗಿದೆ.
ದೇಶದ ಪ್ರಧಾನಿಗಳು ಹಾಗೂ ಛತ್ತೀಸ್ ಘಢ ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಬಂಧಿತ ಕ್ರೈಸ್ತ ಧರ್ಮ ಭಗಿನಿಯರನ್ನು ಬಿಡುಗಡೆಗೊಳಿಸಬೇಕು ಮತ್ತು ಅವರ ಮೇಲೆ ಹಾಕಲಾಗಿರುವ ಸುಳ್ಳುಕ ಪ್ರಕರಣಗಳನ್ನು ಕೈಬಿಡಬೇಕು ಎಂದು ಪ್ರೀತಿ ಸಾಲಿನ್ಸ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.