
ಜನರ ನಿರೀಕ್ಷೆಯನ್ನು ಹುಸಿ ಮಾಡಿದ ಕೇಂದ್ರ ಬಜೆಟ್ : ಉಡುಪಿ ಜಿಲ್ಲಾ ಕಾಂಗ್ರೆಸ್
ಉಡುಪಿ: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಬಜೆಟ್ ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಅನ್ಬ್ಲೆಂಡೆಡ್ ತೈಲ ಮೇಲೆ ಲೀಟರಿಗೆ 2 ರೂಪಾಯಿ ಸುಂಕ ಹೇರಿಕೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ. ದುಡಿಯುವ ಮತ್ತು ಮಧ್ಯಮ ವರ್ಗಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ಆದಾಯ ತೆರಿಗೆಯಲ್ಲಿ ವಿನಾಯಿತಿ ಇಲ್ಲದೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿರುವುದು ಮಧ್ಯಮ ವರ್ಗವನ್ನು ನಿರಾಶೆಗೊಳಿಸಿದೆ. ಆಹಾರ ಭದ್ರತೆ ಮೇಲಿನ ಅನುದಾನ ಇಳಿಕೆ. ಒಂದೆಡೆ ಡಿಜಿಟಲ್ಗೆ ಉತ್ತೇಜನ ನೀಡುತ್ತಾ ಇನ್ನೊಂದೆಡೆ ಡಿಜಿಟಲ್ ಸೇವೆಗಳಿಗೆ ತೆರಿಗೆ ಹೇರಿಕೆ ಸರಕಾರದ ಗೊಂದಲಕ್ಕೆ ಸಾಕ್ಷಿಯಾಗಿದೆ.
ಸರಕಾರಿ ಸೌಮ್ಯ ಸಂಸ್ಥೆಗಳ ಬಂಡವಾಳ ಹಿಂತೆಗೆತ ಹಾಗೂ ಹಲವಾರು ಯೋಜನೆಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದೆ ದಕ್ಷಿಣ ಭಾರತವನ್ನೇ ಕಡೆಗಣ ಸಲಾಗಿದೆ. ಬಜೆಟ್ ಹಣವನ್ನು ಹಂಚಿಕೆ ಮಾಡುವುದನ್ನು ಬಿಟ್ಟರೆ ಯಾವುದೇ ಉದ್ಯೋಗ ಸೃಷ್ಟಿಗೆ ಯೋಜನೆಗಳನ್ನು ರೂಪಿಸಿಲ್ಲ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಜನೋಪಯೋಗಿ ವಸ್ತುಗಳ ಮೇಲಿನ ಸಬ್ಸಿಡಿ ಕಡಿತಗೊಳಿಸಿ ಜನರ ಮೇಲೆ ಹೆಚ್ಚಿನ ಹೊರೆ ಹೊರೆಸಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.