
ಟೆನ್ಷನ್ ತಗೊಳ್ಬೇಡ, ಮದ್ದು ತಗೋ, ಆರಾಮಾಗಿರು: ಮಗಳೊಂದಿಗಿನ ಫೋನ್ ಸಂಭಾಷಣೆ ಬಿಚ್ಚಿಟ್ಟ ಚೈತ್ರಾ ತಾಯಿ!
ಕುಂದಾಪುರ: ಮಗಳನ್ನು ವಶಕ್ಕೆ ಪಡೆದ ದಿನವೇ ಪೊಲೀಸರು ಕರೆ ಮಾಡಿದ್ದರು. ವಶಕ್ಕೆ ಪಡೆಯುವ ಮಾಹಿತಿ ಜೊತೆಗೆ ಮಗಳೊಂದಿಗೆ ಫೋನ್ ನಲ್ಲೇ ಮಾತನಾಡಿಸಿದ್ದಾರೆ. ಫೋನ್ ನಲ್ಲಿ ಮಾತನಾಡುತ್ತಾ ನನಗೆ ಧೈರ್ಯ ತೆಗೆದುಕೊಳ್ಳುವಂತೆ ಹೇಳಿದ್ದಳು. ನೀನು ಟೆನ್ಷನ್ ತಗೊಳ್ಬೇಡ, ಮದ್ದು ತಗೋ, ಆರಾಮಾಗಿರು. ನಾನೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಧೈರ್ಯ ಹೇಳಿದ್ದಾಳೆ ಎಂದು ಚೈತ್ರಾ ಕುಂದಾಪುರ ತಾಯಿ ರೋಹಿಣಿ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಮಗಳ ವಿರುದ್ದ ಬಂದಿರುವ ಕೋಟಿಗಟ್ಟಲೆ ಹಣ ವಂಚನೆ ಆರೋಪದ ಕುರಿತು ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಮಗಳು ಬೇರೆ-ಬೇರೆ ಕಡೆಗಳಲ್ಲಿ ಹೋಗಿ ಭಾಷಣ ಮಾಡುತ್ತಾಳೆ. ಮಾಧ್ಯಮಗಳಲ್ಲೂ ಕೆಲಸ ಮಾಡಿದ್ದಾಳೆ. ಆಕೆ ಚಿಕ್ಕಂದಿನಿಂದಲೂ ಚುರುಕಿನ ಹುಡುಗಿ. ನಮಗೆ ಯಾವ ಚಿಂತೆಯೂ ಕೊಟ್ಟಿಲ್ಲ. ಎಲ್ಲವನ್ನು ಅವಳೇ ನಿಭಾಯಿಸುತ್ತಾಳೆ. ಎಂದೂ ಬೇರೆಯವರ ಹಣಕ್ಕೆ ಆಸೆ ಪಟ್ಟವಳಲ್ಲ. ಕೋಟಿಗಟ್ಟಲೇ ಹಣ ಯಾರು ತಿಂದರೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಮಗಳನ್ನು ಗುರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸದ್ಯ ಮಗಳ ಸ್ಥಿತಿ ಕಂಡು ಬಹಳ ಬೇಸರ ಆಗುತ್ತೆ. ನನ್ನ ಮಗಳನ್ನ ಬಳಸಿಕೊಂಡು ಅವಳನ್ನ ಈ ಸ್ಥಿತಿಗೆ ತರಲಾಗಿದೆ. ತನ್ನ ಕೈಯಿಂದ ಹಣ ಹೋದರೂ ಪರವಾಗಿಲ್ಲ ಬೇರೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ. ಏನೂ ಮಾಡದಿರುವ ತಪ್ಪಿಗೆ ನನ್ನ ಮಗಳು ಗುರಿಯಾಗಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಯ ಪರಿಸ್ಥಿತಿ ನೋಡಿದರೆ ದಿಗಿಲು!
ಚೈತ್ರಾ ಕುಂದಾಪುರ ವಾಸವಿರುವ ಮನೆ ನೋಡಿದರೆ ಕರುಳು ಹಿಂಡಿ ಬರುತ್ತದೆ. ವಯಸ್ಸಾದ ತಾಯಿ ಮನೆಯ ಬಾಗಿಲ ಬಳಿ ನಿಂತು ತಮ್ಮ ಮಗಳಗೆ ಅನ್ಯಾಯ ಮಾಡಲಾಗಿದೆ ಎಂಬ ಅವರ ಅಳುಕಿನ ಧ್ವನಿ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಮಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎನ್ನುವ ತಾಯಿ, ಅದೇ ನೋವಿನಲ್ಲಿ ಮನೆ ಕೆಲಸಗಳನ್ನು ಮಾಡುತ್ತಾ ಮಗಳ ಚಿಂತೆಯಲ್ಲೇ ಕಾಲ ಕಳೆಯುವಂತಾಗಿದೆ.