ಡಬ್ಬಲ್ ಇಂಜಿನ್ ಸರ್ಕಾರದಿಂದ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು – ಬಿ ವೈ ರಾಘವೇಂದ್ರ

Spread the love

ಡಬ್ಬಲ್ ಇಂಜಿನ್ ಸರ್ಕಾರದಿಂದ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು – ಬಿ ವೈ ರಾಘವೇಂದ್ರ

ಕುಂದಾಪುರ: ಡಬ್ಬಲ್ ಇಂಜಿನ್ ಸರ್ಕಾರದ ಆಡಳಿತಾವಧಿಯಲ್ಲಿ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಎಂದೂ ಕಾಣದ ಅಭಿವೃದ್ಧಿ ಕಾರ್ಯಗಳು ಬೈಂದೂರಿನಲ್ಲಿ ನಡೆದಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿವೈ ರಾಘವೇಂದ್ರ ಹೇಳಿದರು.

ಬುಧವಾರ ಕಂದಾಯ ಇಲಾಖೆ, ಉಡುಪಿ ಜಿಲ್ಲಾಡಳಿತ ಇದರ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೈಂದೂರು ತಾಲೂಕು ಕೇಂದ್ರವಾಗಿ ಘೋಷಷಣೆಯಾದ ಬಳಿಕ ಇಲ್ಲಿಗೆ ಅವಶ್ಯಕತೆಯಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪ್ರಮುಖ ಜವಬ್ದಾರಿಯಾಗಿದ್ದು ಬೈಂದೂರು ಅಭಿವೃದ್ದಿ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಹತ್ತು ಕೋಟಿ ಅನುದಾನದ ತಾಲೂಕು ಆಡಳಿತ ಸೌಧ ಅತೀ ಶೀಘ್ರವಾಗಿ ನಿರ್ಮಾಣಗೊಂಡಿದೆ ಎಂದರು.

ಮೂರು ಲಕ್ಷ ಮನೆಗಳಿಗೆ ನೀರು ಕೊಡುವ ಚಿಂತನೆಯಲ್ಲಿ ಕೆಲಸ ಮಾಡಿದ್ದೇವೆ. 785 ಕೋಟಿ ರೂಪಾಯಿ ವೆಚ್ಚದಲ್ಲಿ ವಾರಾಹಿ ನೀರಾವರಿ ಯೋಜನೆ ಮೂಲಕ 43 ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ನೀರಿನ ಪೂರೈಕೆ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೆಂದೂ ಕಾಣದ ಪ್ರಗತಿ ಕಂಡಿದೆ. ಆದರೆ ಕ್ಷೇತ್ರದಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಪೂರ್ವಾಗೃಹ ಪೀಡಿತರಾಗಿ ಅಡ್ಡಗಾಲು ಹಾಕುವ ಕೆಲ ಸ್ತಾಪಿತ ಹಿತಾಸಕ್ತಿಗಳು, ಕೆಲವು ಅಧಿಕಾರಿಗಳ ಕಾರ್ಯಕ್ಕೆ ಕಡಿವಾಣ ಹಾಕಬೇಕಿದೆ ಎಂದರು.

ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಏತ ನೀರಾವರಿ ಯೋಜನೆ ಮೂಲಕ ಕುಡಿಯುವ ನೀರು, ಕೃಷಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಕು ಯೋಜನೆಯಡಿ ಬಹುತೇಕ ಮನೆಗಳಿಗೆ ವಿದ್ಯುತ್ ಸೌಲಭ್ಯ, ಶೈಕ್ಷಣಿಕ ಅಭಿವೃದ್ದಿಯಡಿಯಲ್ಲಿ ಪ್ರತಿ ಶಾಲೆಗಳಿಗೆ ಸುಸಜ್ಜಿತ ಕೊಠಡಿ ನಿರ್ಮಾಣ, ರಸ್ತೆ ನಿರ್ಮಾಣ, ಮೀನುಗಾರರಿಗೆ ಅನುಕೂಲವಾಗುವ ಯೋಜನೆಗಳ ಮೂಲಕ ಬೈಂದೂರು ಸರ್ವತೋಮುಖ ಪ್ರಗತಿ ಕಂಡಿದೆ. ತಾಲೂಕು ಆಡಳಿತ ಸೌಧದಲ್ಲಿ ಜನಸಾಮಾನ್ಯರಿಗೆ ಸಮರ್ಪಕ ಸೇವೆ ನೀಡುವ ಜವಬ್ದಾರಿ ಅಧಿಕಾರಿಗಳದ್ದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ.ಹಾಕೆ, ಮೈಸೂರು ಇಲೆಕ್ಟ್ರಿಕಲ್ ನಿಗಮದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್, ಕರ್ನಾಟಕ ಗೃಹ ಮಂಡಳಿ ಸಮನ್ವಯ ಅಭಿಯಂತರೆ ಸಿ.ಕೆ ಮಂಜುಳಾ, ಸಹಾಯಕ ಕಾರ್ಯಪಾಲಕ ಅಭಿಯಂತರೆ ಎಮ್.ಸಹನ, ಯೋಜನಾ ಆಯೋಗದ ನಾಮನಿರ್ದೇಶಿತ ಸದಸ್ಯೆ ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ, ಕೆ.ಎಂ ಹರೀಶ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರೆ ಎಮ್. ಸಹನಾ ಹಾಗೂ ಕಾರ್ಯಪಾಲಕ ಅಭಿಯಂತರೆ ಮಂಜುಳ ಅವರನ್ನು ಸಮ್ಮಾನಿಸಲಾಯಿತು. ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಲಾಯಿತು.

ಬೈಂದೂರು ತಹಶಿಲ್ದಾರ್ ಶ್ರೀಕಾಂತ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕರಾದ ಗಣಪತಿ ಹೋಬಳಿದಾರ್ ಹಾಗೂ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ವಂದಿಸಿದರು.

ಸಂಸದರ ಕಡಗಣನೆ: ಅಭಿಮಾನಿಗಳ ಆಕ್ರೋಶ

ಉದ್ಘಾಟನಾ ಸಮಾರಂಭದ ಸಭಾ ವೇದಿಕೆಯ ಬ್ಯಾನರ್ ನಲ್ಲಿ ಸಂಸದರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸಂಸದ ಬಿವೈ ರಾಘವೇಂದ್ರ ಅಭಿಮಾನಿಗಳು ಆಕ್ರೋಶ ಹೊರಹಾಕಿದ ಘಟನೆ ನಡೆಯಿತು. ಕಾರ್ಯಕ್ರಮದ ಬ್ಯಾನರ್ ನಲ್ಲಿ ಬಿವೈ ರಾಘವೇಂದ್ರ ಅವರ ಫೋಟೋ ಚಿಕ್ಕದಾಗಿ ಹಾಕಲಾಗಿದ್ದು, ಸಚಿವ ಎಸ್ ಅಂಗಾರ ಹಾಗೂ ಶಾಸಕ ಸುಕುಮಾರ್ ಶೆಟ್ಟಿಯವರ ಫೋಟೊ ದೊಡ್ಡದಾಗಿ ಹಾಕಲಾಗಿತ್ತು. ಇದನ್ನು ಗಮನಿಸಿದ ಸಂಸದರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು. ಬೈಂದೂರಿನ ಅಭಿವೃದ್ದಿಗೆ ಸಾಕಷ್ಟು ಅನುದಾನಗಳನ್ನು ನೀಡಿದ ಮತ್ತು ಆಡಳಿತ ಸೌಧಕ್ಕೆ ಅನುದಾನ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸದರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಲ್ಲೇ ಸಂದರಿಗೆ ಜೈಕಾರ ಹಾಕಿದ ಪ್ರಸಂಗವೂ ನಡೆಯಿತು. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂಸದರ ಪೋಟೋ ಇರುವ ಕಟೌಟ್ ಒಂದನ್ನು ತಂದು ನಿಲ್ಲಿಸಲಾಯಿತು. ಬಳಿಕ ಸಂಸದರು ಮಧ್ಯಪ್ರವೇಶಿಸಿ ಸರ್ಕಾರಿ ಕಾರ್ಯಕ್ರಮದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ ಎಂದು ಸ್ವತಃ ಸಂಸದರೇ ಕಟೌಟನ್ನು ತೆರವುಗೊಳಿಸಿ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆದರು.


Spread the love

Leave a Reply

Please enter your comment!
Please enter your name here