ತಮಿಳುನಾಡು| ತಂದೆ, ಮಗನ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚೆನ್ನೈ: ಆರು ವರ್ಷಗಳ ಹಿಂದೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ತೂತುಕ್ಕುಡಿ ಜಿಲ್ಲೆಯಲ್ಲಿ ವ್ಯಾಪಾರಿ ಪಿ. ಜಯರಾಜ್ ಹಾಗೂ ಅವರ ಪುತ್ರ ಜೆ. ಬೆನಿಕ್ಸ್ ಅವರ ಕಸ್ಟಡಿ ಸಾವಿನ ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯವೊಂದು ಸೋಮವಾರ 9 ಮಂದಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮರಣದಂಡನೆಗೆ ಗುರಿಯಾದ ಪೊಲೀಸರೆಂದರೆ ಇನ್ಸ್ಪೆಕ್ಟರ್ ಶ್ರೀಧರ್, ಸಬ್-ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್, ರಘು ಗಣೇಶ್ ಹಾಗೂ ಪೊಲೀಸ್ ಸಿಬ್ಬಂದಿ ಮುರುಗನ್, ಸಮುದುರೈ, ಮುತ್ತುರಾಜಾ, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಹಾಗೂ ವೈಲುಮುತ್ತು.
‘‘ಇದು ಅಧಿಕಾರ ದುರುಪಯೋಗದ ಪ್ರಕರಣ’’ ಎಂದು ಗಮನ ಸೆಳೆದ ನ್ಯಾಯಾಲಯ, ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿದ್ದಾರೆ ಹಾಗೂ ಈ ತೀರ್ಪು ಪೊಲೀಸರಲ್ಲಿ ಭಯ ಉಂಟು ಮಾಡುವುದಿಲ್ಲ ಎಂದಿದೆ.
‘‘ತಂದೆ ಮತ್ತು ಮಗನನ್ನು ವಿವಸ್ತ್ರಗೊಳಿಸಿ ನಿರ್ದಯವಾಗಿ ಹಲ್ಲೆ ನಡೆಸಲಾಗಿದೆ. ಅದನ್ನು ಓದಿದಾಗ ಹೃದಯ ಕಂಪಿಸುತ್ತದೆ’’ ಎಂದು ನ್ಯಾಯಾಲಯ ಹೇಳಿದೆ.
ವ್ಯಾಪಾರಿಗಳಿಗೆ ಬರ್ಬರ ಕಸ್ಟಡಿ ಚಿತ್ರಹಿಂಸೆ ಹಾಗೂ ಬಳಿಕ ಅವರ ಹತ್ಯೆಯನ್ನು ಅಪರೂಪದ ಪ್ರಕರಣ ಎಂದು ಬಣ್ಣಿಸಿದ ಸಿಬಿಐ, ಪರೋಲ್ಗೆ ಅವಕಾಶ ನೀಡದೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ಗರಿಷ್ಠ ದಂಡನೆ ವಿಧಿಸಬೇಕು ಎಂದು ಕೋರಿತ್ತು.
