
ತಿ.ನರಸೀಪುರದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ
ತಿ.ನರಸೀಪುರ: ತಾಲೂಕಿನಾದ್ಯಂತ ಚಿರತೆ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಕಳೆದು ಮೂರು ತಿಂಗಳ ಅವಧಿಯಲ್ಲಿ ನಾಲ್ವರು ಚಿರತೆಗೆ ಬಲಿಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದ ಜಯಂತ್ (11) ಎಂಬ ಬಾಲಕನ ಮೇಲೆ ದಾಳಿ ನಡೆಸಿ ಎಳೆದೊಯ್ದಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ನಡೆದ ಘಟನೆಯಲ್ಲಿ ಬಾಲಕ ನಾಪತ್ತೆಯಾಗಿರುವ ಬಗ್ಗೆ ಗ್ರಾಮಸ್ಥರು ಹುಡುಕಾಟ ನಡೆಸಿದ್ದು ,ಇಂದು ಗ್ರಾಮದಿಂದ 1 ಕಿ.ಮೀ ದೂರವಿರುವ ಪೊದೆಯೊಂದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ. ಬಾಲಕನ ಮೃತದ ದೇಹದ ಅರ್ಧ ಭಾಗವು ಮಾತ್ರ ದೊರೆತಿದ್ದು ,ತಲೆ ಭಾಗವನ್ನು ಚಿರತೆ ತಿಂದಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಚಿರತೆ ದಾಳಿಗೆ ಇದು ನಾಲ್ಕನೇ ಬಲಿಯಾಗಿದ್ದು ,ಎರಡು ದಿನದ ಹಿಂದೆಯಷ್ಟೆ ಕನ್ನಾಯಕನಹಳ್ಳಿ ಗ್ರಾಮದ ಸಿದ್ದಮ್ಮಳನ್ನು ಚಿರತೆ ಬಲಿ ಪಡೆದಿತ್ತು . ಈ ಹಿಂದೆ ಉಕ್ಕಲಗೆರೆ ಮಂಜುನಾಥ ,ಎಂ.ಕೆಬ್ಬೆಹುಂಡಿಯ ಮೇಘನಾಳ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿತ್ತು .ಇದೀಗ ಬಾಲಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆ ರೂಪ ಪಡೆದುಕೊಂಡಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು ಭೇಟಿ ನೀಡಿ ಬಾಲಕನ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ,ಹೊರಳಹಳ್ಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ಅರಂಭಿಸಲಾಗಿದೆ.
ಈ ನಡುವೆ ಶನಿವಾರ ಚಿದರವಳ್ಳಿ ಗ್ರಾಮದ ಮಹೇಶ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಎರಡು ನವಜಾತ ಚಿರತೆ ಮರಿಗಳ ಸಿಕ್ಕ ನಂತರ ಚಿರತೆ ಸೆರೆಗೆ ಗದ್ದೆಯ ಪಕ್ಕದಲ್ಲಿ ಚಿರತೆ ಮರಿಗಳ ಜೊತೆಯಲ್ಲೇ ಬೋನು ಇಡಲಾಗಿತ್ತು. ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ ಎಂದು ಅರಣ್ಯ ಇಲಾಖೆಯು ಖಚಿತ ಪಡಿಸಿದೆ. ಒಂದು ಕಡೆ ಚಿರತೆಗಳನ್ನು ಸೆರೆ ಹಿಡಿಯಲಾಗುತ್ತಿದ್ದರೆ, ಮತ್ತೊಂದೆಡೆ ಚಿರತೆಗಳ ದಾಳಿಯೂ ಮುಂದುವರೆಯುತ್ತಿದ್ದು, ಜನ ಮಾತ್ರ ಭಯದಲ್ಲಿಯೇ ಬದುಕುವಂತಾಗಿದೆ.