
ತುಳುನಾಡಿನ ದೈವಗಳ ಬಗ್ಗೆ ಕೇವಲವಾಗಿ ಮಾತನಾಡಲು ಅರಗ ಜ್ಞಾನೇಂದ್ರ ಯಾರು: – ನವೀನ್ ಸಾಲಿಯಾನ್ ಪ್ರಶ್ನೆ
ಕಾರ್ಯಕ್ರಮವೊಂದರಲ್ಲಿ ಶಿವಧೂತ ಗುಳಿಗ ನಾಟಕದ ಬಗ್ಗೆ ಅವಹೇಳನ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಳುನಾಡಿನ ದೈವಗಳ ಬಗ್ಗೆ ಕೇವಲವಾಗಿ ಮಾತನಾಡಲು ಯಾರು ಎಂದು ಕಾಪು ಬ್ಲಾಕ್ ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಸಾಲಿಯಾನ್ ಪ್ರಶ್ನಿಸಿದ್ದಾರೆ.
ಬೇರೆ ಪಕ್ಷದವರು ಮಾತನಾಡಿದರೆ ತಪ್ಪು ಆದರೆ ಬಿಜೆಪಿಗರು ಏನೇ ಮಾತನಾಡಿದರೂ ಅಥವ ತುಳುನಾಡಿನ ವಿರುದ್ದ ಅವಹೇಳನ ಮಾಡಿದರೆ ಅದನ್ನು ಸಮರ್ಥಿಸುವ ಸಂಸ್ಕೃತಿಗೆ ನಮ್ಮ ಧಿಕ್ಕಾರವಿದೆ. ತುಳುನಾಡಿದ ದೈವಗಳ ಬಗ್ಗೆ ಕನಿಷ್ಠ ಜ್ಞಾನವೂ ಇರದ ಒರ್ವ ಗೃಹಸಚಿವರು ಅನಾಗರಿಕರಾಗಿ ಮಾತನಾಡಿರುವುದು ಖಂಡನೀಯ. ತುಳು ಸಂಸ್ಕೃತಿ ಎಂದರೆ ಅದು ತುಳುವರ ಬದುಕು ಮತ್ತು ನಂಬಿಕೆಯಾಗಿದೆ. ತುಳುನಾಡಿದ ಆರಾಧ್ಯ ದೈವ ಗುಳಿಗನಿಗೆ ಅವಮಾನಿಸಿದ ಅರಗ ಜ್ಞಾನೇಂದ್ರ ಅವರ ವರ್ತನೆಯನ್ನು ಕ್ಷಮಿಸುವಂತಿಲ್ಲ.
ತುಳುನಾಡಿನವರು ಆದ ನಾವು ನಮ್ಮನ್ನು ಕಾಪಾಡುವ ಧರ್ಮ ದೈವಗಳಿಗೆ ಅವಮಾನ ಮಾಡಿದಾಗ ಧರ್ಮ ದೈವಗಳ ಪವಿತ್ರತೆಗೆ ದಕ್ಕೆ ಉಂಟು ಮಾಡಿದಾಗ ದೈವಗಳ ಪಾವಿತ್ರತೆಯನ್ನು ಹೋರಾಟ ಮಾಡಿ ಕಾಪಾಡುವುದು ತುಳುನಾಡಿನವರಾದ ನಮ್ಮ ಆದ್ಯ ಕರ್ತವ್ಯವಾಗಿದ್ದು ಇಂತಹ ಅನಾಗರಿಕ ಹೇಳಿಕೆಯನ್ನು ನೀಡಿದ ಗೃಹಸಚಿವರು ತುಳುನಾಡಿಗರ ಕ್ಷಮೆಯನ್ನು ಯಾಚಿಸುವಂತೆ ನವೀನ್ ಸಾಲಿಯಾನ್ ಆಗ್ರಹಿಸಿದ್ದಾರೆ.