ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಬಿಜೆಪಿ ಕಾರ್ಪೊರೇಟರ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಡಿವೈಎಫ್ಐ ಒತ್ತಾಯ 

Spread the love

ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಬಿಜೆಪಿ ಕಾರ್ಪೊರೇಟರ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಡಿವೈಎಫ್ಐ ಒತ್ತಾಯ 

ಉರ್ವಸ್ಟೋರ್ ಸುಂಕದಕಟ್ಟೆಯ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಧೀರ್ಘ ಕಾಲದಿಂದ ಅನುಭವಿಸುತ್ತಿದ್ದು, ಅದನ್ನು ಪರಿಹರಿಸಬೇಕಾದ ಸ್ಥಳೀಯ ಕಾರ್ಪೊರೇಟರ್ ತನ್ನ ಜವಾಬ್ದಾರಿಯನ್ನು ಮರೆತು ನಾಗರಿಕರ ಮೇಲೆಯೇ ಎಗರಾಡಿ ಅಸಂಬದ್ಧ ಮಾತುಗಳನ್ನಾಡಿದ್ದು,ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಡಿವೈಎಫ್ ಐ ನೇತೃತ್ವದಲ್ಲಿ ಮನಪಾ ಮೇಯರ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಅಲ್ಪಸ್ವಲ್ಪ ಸುಧಾರಿಸಿದ್ದು,ಅದನ್ನು ಶಾಶ್ವತವಾಗಿ ಪರಿಹರಿಸಬೇಕು ಹಾಗೂ ಸ್ಥಳೀಯ ನಾಗರಿಕರು ಸಮಸ್ಯೆಯಲ್ಲಿದ್ದಾಗ ಅತ್ತ ಕಡೆ ಮುಖ ಮಾಡದೆ,ಸಮಸ್ಯೆ ಅಲ್ಪಸ್ವಲ್ಪ ಸುಧಾರಣೆ ಕಂಡಾಗ ದಿಢೀರ್ ಭೇಟಿ ನೀಡಿ ಅಸಂಬದ್ಧ ಮಾತುಗಳನ್ನಾಡಿದ ಸ್ಥಳೀಯ BJP ಕಾರ್ಪೊರೇಟರ್ ರವರು ಮೇಯರ್,ಆಯುಕ್ತರು, ಶಾಸಕರಿಗೆ ಮನವಿ ಮಾಡಿದ್ದೇ ದೊಡ್ಡ ಅಪರಾಧ ಎನ್ನುವ ರೀತಿಯಲ್ಲಿ ಪ್ರತಿ ಮನೆಗೆ ಹೋಗಿ ನಿಮ್ಮ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ, ದಲಿತರಿಗೆ ನೀಡಿದ ಎಲ್ಲಾ ಸವಲತ್ತುಗಳನ್ನು ನಿಲ್ಲಿಸುವುದಾಗಿ ಬಹಿರಂಗ ಬೆದರಿಕೆ ಹಾಕಿರುವುದು ದಲಿತ ವಿರೋಧಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ ಐ ಒತ್ತಾಯಿಸಿದೆ.

ನಿಯೋಗದಲ್ಲಿ ಡಿವೈಎಫ್ ಐ ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್,CPIM ಜಿಲ್ಲಾ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ ಐ ನಾಯಕರಾದ ಪ್ರಶಾಂತ್ ಎಂ ಬಿ, ಪ್ರದೀಪ್, ಸುಖೇಶ್, ಪ್ರಶಾಂತ್ ಆಚಾರ್ಯ, ಸ್ಥಳೀಯ ಹಿರಿಯ ನಾಗರಿಕರಾದ ಪದ್ಮನಾಭ ಕುಲಾಲ್, ತಮ್ಮಣ್ಣ ಮಬೆನ್, ಗಂಗಾಧರ್, ರಾಮ ಪೂಜಾರಿ, ಕುಶಲ, ದಿವ್ಯ, ಶಿಲ್ಪಾ, ಸುರೇಖಾ, ವಂದನಾ, ನಾಗವೇಣಿ, ಸರೋಜಾ, ನೇಬಿಸಾ ಬಾನು ಸೂಕ್ಷ್ಮ ಮುಂತಾದವರು ಉಪಸ್ಥಿತರಿದ್ದರು


Spread the love