
ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೆದಾರ್ ಮೋಹನ್ ಹೊಳ್ಳ ರಸ್ತೆ ಅಪಘಾತದಲ್ಲಿ ನಿಧನ
ಮಂಗಳೂರು: ನ್ಯಾಯಾಂಗ ಇಲಾಖೆಯಲ್ಲಿ 3 ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮೋಹನ್ ಹೊಳ್ಳ ಅವರು ಬುಧವಾರ ಕೋಟೆಕಾರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು.
ಹಾಸನ ಜಿಲ್ಲೆಯ ಅರಸೀಕೆರೆಯ ಮುನ್ಸಿಫ್ ನ್ಯಾಯಾಲಯ ದಲ್ಲಿ ದಿನಾಂಕ 17.4.1978 ರಂದು ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ ಮೋಹನ ಹೊಳ್ಳರು ಉಡುಪಿ; ಪುತ್ತೂರು; ಬಂಟ್ವಾಳ ಮತ್ತು ಮಂಗಳೂರಿನ ನ್ಯಾಯಾಲಯಗಳಲ್ಲಿ ಬೆಂಚ್ ಕ್ಲರ್ಕ್ ಹಾಗೂ ಶಿರಸ್ತೆದಾರ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದಿನಾಂಕ 30.6.2014 ರಂದು ಸೇವೆಯಿಂದ ವಯೋನಿವೃತ್ತಿ ಹೊಂದಿದರು.
ನಿವೃತ್ತಿಯ ಬಳಿಕ ಮಂಗಳೂರು ತಾಲ್ಲೂಕಿನ ಸೋಮೇಶ್ವರದ ತಮ್ಮ ಸ್ವಗ್ರಹದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇಂದು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಕೋಟೆಕಾರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯನ್ನು ದಾಟುತ್ತಿರುವ ಸಮಯದಲ್ಲಿ ಅತಿ ವೇಗದಿಂದ ಬರುತ್ತಿದ್ದ ಮೋಟಾರ್ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಅಸುನೀಗಿದರು. ಮೃತರು ಪತ್ನಿ ಹಾಗೂ ಇಬ್ಬರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ.