ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಆಹಾರ ಕಿಟ್ ವಿತರಣೆಗೆ ಸಂಸದರಿಂದ ಚಾಲನೆ

Spread the love

ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಆಹಾರ ಕಿಟ್ ವಿತರಣೆಗೆ ಸಂಸದರಿಂದ ಚಾಲನೆ

ಮಂಗಳೂರು: ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಯಕ್ಷಗಾನ ಕಲಾವಿದರು, ನಾಟಕ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸೇವಾ ಸಂಸ್ಥೆಗಳು ಕಲಾವಿದರಿಗೆ ನೆರವನ್ನು ನೀಡಿ ಕಲಾವಿದರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದರು.

ಬಂಟ್ಸ್ ಹಾಸ್ಟೇಲ್ ಕರಂಗಲ್ಪಾಡಿ ಮಾರ್ಕೆಟ್ ಬಳಿಯ ಹಾಪ್ ಕಾಮ್ಸ್ ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಮಂಗಳೂರು ಘಟಕ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ನೀಡಿದ ಆಹಾರ ದಿನಸಿ ಸಾಮಾಗ್ರಿ ಕಿಟ್ ಗಳನ್ನು ಬಿಜೆಪಿ ರಾಜ್ಯಾಧ್ಯಾಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ವಿತರಿಸಿ ಮಾತನಾಡಿದರು.

ಕಲಾವಿದರಲ್ಲಿ ವೃತ್ತಿ ವೈಷಮ್ಯ ಇರುವುದು ಸಹಜ. ಆದರೆ ತೆಂಕು ತಿಟ್ಟಿನ ಪ್ರಸಿದ್ದ ಭಾಗವತ ಪಟ್ಲ ಸತೀಶ್ ಶೆಟ್ಟಿ ಕಲಾವಿದರಾಗಿದ್ದು ಕೊಂಡು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಇದು ಭಗವಂತನ‌ ಕೆಲಸ. ಸರಕಾರ ಮಾಡುವ ಕಾರ್ಯವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ಮಾಡುತ್ತಿದೆ ಎಂದು ಟ್ರಸ್ಟ್ ನ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಕಳೆದ ವರ್ಷವೂ ಯಕ್ಷಗಾನ ಕಲಾವಿದರಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ಅಹಾರ ಸಾಮಾಗ್ರಿ ಕಿಟ್ ಗಳನ್ನು ವಿತರಿಸಿತ್ತು. ಈ ಬಾರಿಯೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿ ಆರು ಜಿಲ್ಲೆಗಳಲ್ಲಿರುವ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಕಲಾವಿದರಿಗೆ ಕಿಟ್ ವಿತರಣೆಯಾಗಲಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಹವ್ಯಾಸಿ ಘಟಕದ ಗೌರಾವಾಧ್ಯಕ್ಷ ಡಾ. ಪ್ರಭಾಕರ ಜೋಷಿ, ಕಾಪೋರೇಟರರುಗಳಾದ ಮನೋಹರ್ ಶೆಟ್ಟಿ, ರಾಧಾಕೃಷ್ಣ, ಟ್ರಸ್ಟ್ ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಘಟಕದ ಅಧ್ಯಕ್ಷ ಪ್ರದೀಪ್ ಆಳ್ವ ಕದ್ರಿ, ಪಧಾದಿಕಾರಿಗಳಾದ ರವಿ ಶೆಟ್ಟಿ ಅಶೋಕನಗರ, ಕೃಷ್ಣ ಶೆಟ್ಟಿ ತಾರೇಮಾರ್, ತಾರಾನಾಥ ಶೆಟ್ಟಿ ಬೋಳಾರ, ಸಂತೋಷ್ ರೈ ನೆಲ್ಯಾಡಿ ಗೋಪಿನಾಥ ಶೆಟ್ಟಿ ಉಪಸ್ಥಿತರಿದ್ದರು. ಪ್ರದೀಪ್ ಆಳ್ವ ವಂದಿಸಿದರು. ನವನೀತ ಶೆಟ್ಟಿ ನಿರೂಪಿಸಿದರು.


Spread the love