Home Mangalorean News Kannada News ಪಡುಬಿದ್ರಿ : ರಿಕ್ಷಾ ಚಾಲಕರು ಸಮಾಜ ಪ್ರತಿಯೋರ್ವನ ಕಷ್ಟಕಾರ್ಪಣ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾಯಕ ನಿರತರು : ವಿನಯ...

ಪಡುಬಿದ್ರಿ : ರಿಕ್ಷಾ ಚಾಲಕರು ಸಮಾಜ ಪ್ರತಿಯೋರ್ವನ ಕಷ್ಟಕಾರ್ಪಣ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾಯಕ ನಿರತರು : ವಿನಯ ಕುಮಾರ್ ಸೊರಕೆ

Spread the love

ಪಡುಬಿದ್ರಿ : ಊರಿನ ದಿಕ್ಸೂಚಿಯಂತಿರುವ ರಿಕ್ಷಾ ಚಾಲಕರು ಸಮಾಜ ಪ್ರತಿಯೋರ್ವನ ಕಷ್ಟಕಾರ್ಪಣ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾಯಕ ನಿರತರು. ಸಮಾಜದಲ್ಲಿ ಅವರ ಸೇವೆ ಬಹಳಷ್ಟು ದೊಡ್ಡ ಪಾತ್ರ ವಹಿಸುತ್ತದೆ. ಎಂದು ಸಂಘದ ಗೌರವಾಧ್ಯಕ್ಷ, ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು  ಕಾಪು ಪೇಟೆಯಲ್ಲಿ ನಡೆದ ನ್ಯೂ ಅಟೋ ರಿಕ್ಷಾ ಚಾಲಕರ ಮಾಲಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

IMG-20150712-WA0035

ಬಹಳಷ್ಟು ಕಷ್ಟ ಪಟ್ಟು ದುಡಿದು ಕುಟುಂಬ ಪೋಷಣೆ ಮಾಡುವ ರಿಕ್ಷಾ ಚಾಲಕರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದ ಸಚಿವರು, ಕಾಪು ನ್ಯೂ ಅಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಮನವಿಯ ಅರ್ಜಿ ಮುಖಾಂತರ ಆಟೋ ರಿಕ್ಷಾ ಚಾಲಕರಿಗೆ ವಸತಿ ನೀಡುವ ಯೋಜನೆಯನ್ನು ಶೀಘ್ರದಲ್ಲೇ ಹಮ್ಮಿಕೊಳ್ಳುವ ಮೂಲಕ ವಿಶೇಷ ವಸತಿ ಯೋಜನೆಯಡಿ ಕಾರ್ಯಗತಗೊಳಿಸಲು ಯತ್ನಿಸುವ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷರಾಗಿದ್ದ ಆರ್ಯಭಟ್ ಪ್ರಶಸ್ತಿ ವಿಜೇತ ಸಾಯಿರಾಧ ಮನೋಹರ್ ಎಸ್. ಶೆಟ್ಟಿ ಮಾತನಾಡಿ, ಸಮಾಜದಲ್ಲಿ 24*7 ಮಾದರಿಯಲ್ಲಿ ಸೇವೆಯನ್ನು ನೀಡುವ ರಿಕ್ಷಾ ಚಾಲಕರ ಕಾಯಕ, ಶ್ರಮವನ್ನು ಶ್ಲಾಘಿಸಿದರು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ನವೀನ್‍ಚಂದ್ರ ಜೆ. ಶೆಟ್ಟಿ, ಸಮಾಜ ರತ್ನ ಕೆ. ಲೀಲಾಧರ ಶೆಟ್ಟಿ, ಕಾಪು ಸಿ.ಎ. ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮಾತನಾಡಿದರು.
ಕಳೆದ ಒಂದೂವರೆ ವರ್ಷಗಳಿಂದ ಬ್ರಹ್ಮಾವರ ಬಳಿಯ ನೀಲಾವರ ಕ್ರಾಸ್‍ನಲ್ಲಿ ಮಹಿಳಾ ರಿಕ್ಷಾ ಚಾಲಕಳಾಗಿ ದುಡಿಯುತ್ತಿರುವ ಮನೀಷಾ ಬ್ರಹ್ಮಾವರ ಅವರನ್ನು ಅಭಿನಂದಿಸಲಾಯಿತು.
ಬೆಳಪು ಗ್ರಾ.ಪಂ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ದೇವಿಪ್ರಸಾದ್ ಕನ್‍ಸ್ಟ್ರಕ್ಷನ್ಸ್ ಮಾಲಕ ಕೆ. ವಾಸುದೇವ ಶೆಟ್ಟಿ, ಬಾಲಾಜಿ ಕನ್‍ಸ್ಟ್ರಕ್ಷನ್ಸ್ ಯೋಗೀಶ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಆರ್. ಪಾಲನ್, ಗೂಡ್ಸ್ ಟೆಂಪೋ ಸಂಘದ ಗೌರವಾಧ್ಯಕ್ಷ ವಿನಯ ಬಲ್ಲಾಳ್, ಉದ್ಯಮಿ ಶ್ರೀಕರ ಶೆಟ್ಟಿ, ಕಾರು ಚಾಲಕ ಮಾಲಕರ ಸಂಘದ ಕೇಶವ ಎಲ್. ಬಂಗೇರ, ಕಾಪು ಗ್ರಾ.ಪಂ ಮಾಜಿ ಅಧ್ಯಕ್ಷೆ ಉಷಾ ಶೆಣೈ, ಉದ್ಯಮಿ ಹರೀಶ್ ನಾಯಕ್, ಅಭಿಮಾನ್ ಗೋಲ್ಡ್ ಮಾಲಕ ಹಾಜಬ್ಬ, ಸಂಘದ ಅಧ್ಯಕ್ಷ ಅನಿಲ್ ಶೆಟ್ಟಿ ಮಲ್ಲಾರು, ಕೋಶಾಧಿಕಾರಿ ಶಶಿಧರ ಕೊಂಬಗುಡ್ಡೆ ವೇದಿಕೆಯಲ್ಲಿದ್ದರು.
ಗೀತಾವಿಜಯ ಸಾಲ್ಯಾನ್ ಪ್ರಾರ್ಥಿಸಿದರು. ಎಂ.ಕೆ. ರಫೀಕ್ ಸ್ವಾಗತಿಸಿದರು. ಉಮ್ಮರ್ ಮಜೂರು ವಂದಿಸಿದರು. ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version