
ಪಡುಬಿದ್ರೆ: ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ರೂ 5 ಲಕ್ಷ ವಶಕ್ಕೆ
ಪಡುಬಿದ್ರೆ: ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 5 ಲಕ್ಷ ನಗದನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಚೆಕ್ ಪೋಸ್ಟಿನಲ್ಲಿ ಪೊಲೀಸ್ ಉಪನಿರೀಕ್ಷಕರಾದ ಪುರುಷೋತ್ತಮ ಎ ಅವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ KA-20-ME-2561 ನೇ TOYOTA GLANZA ನೇ ಬಿಳಿ ಬಣ್ಣದ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಚಾಲಕನ ಎಡ ಬದಿಯ ಟೂಲ್ಸ್ ಬಾಕ್ಸ್ ಒಳಗಡೆ ಒಂದು ಕೇಸರಿ ಬಣ್ಣದ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಬಂಟ್ವಾಳ ತಾಲೂಕು, ಪ್ರಸಾದ ಎಂಬ ನೀಲಿ ಬಣ್ಣ ಪ್ರಿಂಟ್ ಇರುವ ಕೈ ಚೀಲ ಇದ್ದು ಅದನ್ನು ಪರಿಶೀಲಿಸಿದಾಗ ಅದರೊಳಗೆ 500 ರೂಪಾಯಿ ಮುಖ ಬೆಲೆಯ ಭಾರತೀಯ ಕರೆನ್ಸಿ ನೋಟುಗಳಿರುವ ಒಟ್ಟು ಸೇರಿಸಿ ಬಂಡಲ್ ಮಾಡಿ ಇಟ್ಟಿರುವ ಹಣ ಕಂಡು ಬಂದಿದೆ.
ಈ ಹಣದ ಕುರಿತು ಕಾರಿನ ಚಾಲಕ ಅಹಮ್ಮದ್ ಕಬೀರ್ ಹಾಗೂ ಕಾರಿನಲ್ಲಿ ಇದ್ದ ಅಬ್ದುಲ್ ಖಾದರ್ ಜೈಲಾನಿ ಎಂಬುವರನ್ನು ವಿಚಾರಿಸಿದಾಗ ಹಣದ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ ಆದ್ದರಿಂದ ರೂಪಾಯಿ 5,00,000/- ಮತ್ತು ಕಾರನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.