
ಪರಿಸರ ಸಂರಕ್ಷಣೆಯತ್ತ ಚಿತ್ತ ಹರಿಸೋಣ…
ಪ್ರತಿ ವರ್ಷ ಜೂ.5ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಉದ್ದೇಶ ಪರಿಸರವನ್ನು ಕಾಪಾಡುವುದಾಗಿದೆ. ಆದರೆ ಇದು ಇತ್ತೀಚೆಗಿನ ದಿನಗಳಲ್ಲಿ ಕರ್ತವ್ಯ ಎಂಬಂತೆ ನಡೆಯದೆ ಕೇವಲ ತೋರಿಕೆಗಾಗಿ, ಕಾಟಾಚಾರಕ್ಕಾಗಿ ನಡೆಯುತ್ತದೆ. ನಿಜವಾಗಿ ಹೇಳಬೇಕೆಂದರೆ ಪರಿಸರ ರಕ್ಷಣೆ ಎನ್ನುವುದು ಒಂದು ದಿನದ ಕೆಲಸವಲ್ಲ ಅದು ನಿರಂತರ ಪ್ರಕ್ರಿಯೆ. ಇದನ್ನು ಮರೆತ ನಾವು ಪರಿಸರ ದಿನದಂದು ಗಿಡನೆಟ್ಟು ಬೀಗುತ್ತಿದ್ದೇವೆ.
ಇವತ್ತು ಹಿರಿಯರನ್ನು ಮಾತನಾಡಿಸಿದರೆ ಅಯ್ಯೋ ಮೊದಲು ಹೀಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಇಷ್ಟೊಂದು ಬಿಸಿಲಿನ ಧಗೆಯಿರಲಿಲ್ಲ. ಮೈಮರಗಟ್ಟುವ ಚಳಿಯಿದ್ದರೂ ಯಾರಿಗೂ ತೊಂದರೆಯಾಗುತ್ತಿರಲಿಲ್ಲ.. ಎಲ್ಲವೂ ಕಾಲಕ್ಕೆ ತಕ್ಕಂತೆ ಸರಿಯಾಗಿ ನಡೆಯುತ್ತಿತ್ತು. ಈಗ ಎಲ್ಲ ಹಾಳಾಗಿದೆ ಎಂದು ತಮ್ಮ ಗತವೈಭವವನ್ನು ತೆರೆದಿಡುತ್ತಾ ಇವತ್ತಿನ ದುಸ್ಥಿತಿಗೆ ಹಿಡಿಶಾಪ ಹಾಕುತ್ತಾರೆ. ಹಾಗಾದರೆ ಇದೆಲ್ಲ ಆಗಿರುವುದು ಯಾರಿಂದ ನಮ್ಮಿಂದಲೇ ಅಲ್ಲವೆ?
ಭೌಗೋಳಿಕವಾಗಿ ನೋಡುವುದಾದರೆ ದಿನದಿಂದ ದಿನಕ್ಕೆ ನಾವು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅದನ್ನು ಅಭಿವೃದ್ಧಿ ಎಂದು ಕೂಡ ಕರೆಯುತ್ತಿದ್ದೇವೆ. ನಮಗೆ ಮೂಲಭೂತ ಸೌಲಭ್ಯಗಳು ಬೇಕು. ಆ ಸೌಲಭ್ಯ ಕಲ್ಪಿಸಬೇಕೆಂದರೆ ಅಲ್ಲಿ ಒಂದಷ್ಟು ಬದಲಾವಣೆ ಆಗಲೇ ಬೇಕು.
ಒಂದು ಉತ್ತಮ ರಸ್ತೆ ಬೇಕೆಂದರೆ ಬೆಟ್ಟಗುಡ್ಡ ಅಗೆಯಬೇಕು, ಮರಗಳನ್ನು ಕಡಿಯಬೇಕು. ಅದಷ್ಟನ್ನು ಮಾಡಿಲ್ಲ ಅಂದರೆ ರಸ್ತೆ ನಿರ್ಮಾಣ ಆಗಲ್ಲ. ರಸ್ತೆಯೇ ಇಲ್ಲ ಅಂದ ಮೇಲೆ ಅಭಿವೃದ್ದಿ ಎನ್ನಲಾಗುವುದಿಲ್ಲ. ನಾವು ಅಭಿವೃದ್ಧಿಯ ಬಗ್ಗೆ ಮಾತನಾಡಿದಾಗಲೆಲ್ಲ. ಅದರ ಉಪಯೋಗವನ್ನು ಮನುಷ್ಯ ಅನುಭವಿಸಿದರೂ ಕೂಡ ದುಷ್ಪರಿಣಾಮ ಮಾತ್ರ ಪ್ರಕೃತಿ ಮೇಲೆಯೇ ಎಂಬುವುದರಲ್ಲಿ ಎರಡು ಮಾತಿಲ್ಲ. ಇವತ್ತು ನಮಗೆಲ್ಲರಿಗೂ ಹಣದ ವ್ಯಾಮೋಹ.. ಪ್ರತಿಯೊಂದು ವಿಚಾರದಲ್ಲೂ ಲಾಭ ನಷ್ಟದ ಲೆಕ್ಕಚಾರ ಮಾಡುತ್ತೇವೆ. ಅಪ್ಪ ನೆಟ್ಟು ಬೆಳೆಸಿದ ಹಲಸಿನ ಮರದ ಹಣ್ಣನ್ನು ತಿಂದು ಬೆಳೆಯುವ ಮಗನಿಗೆ ಅದು ಕೊಡುವ ಹಣ್ಣಿಗಿಂತ ಅದನ್ನು ಕಡಿದು ಮಾರಿದರೆ ಸಿಗುವ ಹಣವೇ ಮುಖ್ಯವಾಗುತ್ತದೆ. ಇಲ್ಲಿ ಮರದ ಹಣ್ಣಿಗಿಂತ ಅದು ತಂದುಕೊಡುವ ಹಣವೇ ಕೆಲಸ ಮಾಡುತ್ತದೆ.
ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ. ಭತ್ತದ ಕೃಷಿಯಲ್ಲಿ ಲಾಭವಿಲ್ಲ ಎಂಬ ಕಾರಣಕ್ಕೆ ಕೆಲವು ಸದ್ದಿಲ್ಲದೆ ತೋಟಗಳಾಗಿದ್ದರೆ ಮತ್ತೆ ಕೆಲವು ಪಾಳುಬಿದ್ದಿವೆ. ದೊಡ್ಡ ಮರಗಳಿಂದ ಕೂಡಿದ ಕಾಡುಗಳ ನಡುವೆ ತಂಪಾದ ವಾತಾವರಣದಲ್ಲಿ ಕಂಡು ಬರುತ್ತಿದ್ದ ಏಲಕ್ಕಿ ನಾಶವಾಗಿ ಅವು ಕಾಫಿ ತೋಟವಾಗಿ ಮಾರ್ಪಟ್ಟಿವೆ.
ನಾವೆಷ್ಟು ಲೆಕ್ಕಚಾರಿಗಳಾಗಿ ಸ್ವಾರ್ಥಿಗಳಾಗುತ್ತಿದ್ದೇವೆ ಎಂದರೆ ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ. ಜತೆಗೆ ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರುವ ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಲೇ ಇಲ್ಲ.
ನೀಲಗಿರಿ ಮರದಡಿಯಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ. ಅವುಗಳಿಂದ ಪ್ರಾಣಿಪಕ್ಷಿ ಭೂಮಿಗೂ ಒಳಿತಾಗುವುದಿಲ್ಲ. ಅವು ಹಣ ತಂದು ಕೊಡುತ್ತವೆ ಎಂಬ ಉದ್ದೇಶಕ್ಕಷ್ಟೆ ನಾವು ಅವುಗಳನ್ನು ಬೆಳೆಯುತ್ತಿದ್ದೇವೆ. ನಮಗೆ ಪರಿಸರ ಸ್ನೇಹಿ ಅರಣ್ಯ ಬೇಕಾಗಿಲ್ಲ. ಇದರ ಪರಿಣಾಮವೇ ಇವತ್ತು ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಬರುವಂತಾಗಿದ್ದು..
ಪ್ರತಿವರ್ಷ ವನಮಹೋತ್ಸವ, ಪರಿಸರ ದಿನಾಚರಣೆಯನ್ನು ಗಿಡನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಸಾವಿರಾರು ಗಿಡಗಳನ್ನು ನೆಡುತ್ತಲೇ ಇದ್ದೇವೆ. ಅದು ಕೆಲವರಿಗೆ ಪ್ರಚಾರ ಪಡೆಯುವುದಕ್ಕಷ್ಟೆ ಸೀಮಿತವಾಗಿ ಹೋಗಿದೆ. ದುರಂತ ಏನೆಂದರೆ ಕಳೆದ ವರ್ಷ ನೆಟ್ಟ ಸ್ಥಳದಲ್ಲೇ ಈ ವರ್ಷವೂ ಗಿಡ ನೆಡುತ್ತೇವೆ. ಆದರೆ ನಾವ್ಯಾರೂ ಕಳೆದ ವರ್ಷ ನೆಟ್ಟ ಗಿಡ ಏನಾಯಿತು ಎಂದು ಯೋಚಿಸುವುದೇ ಇಲ್ಲ. ಮೊದಲಿಗೆ ನಾವು ನಮ್ಮ ಮನೆಯಿಂದಲೇ ಪರಿಸರ ಸಂರಕ್ಷಣೆಗೆ ಮುಂದಾದರೆ ಪರಿಸರ ದಿನಾಚರಣೆ ಅರ್ಥ ಬರಲಿದೆ….