ಪಿಲಿಕುಳದಲ್ಲಿ ವಿಶ್ವ ಪರಿಸರ ದಿನಾಚರಣೆ
ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ. ಶ್ರೀಕಾಂತ್ ರಾವ್ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯಲ್ಲಿ ಕಾಲಾನುಸಾರವಾಗಿ ಮಾನ್ಸೂನ್ಗಳು ಸಂಭವಿಸುತ್ತಿಲ್ಲ. ಹವಾಮಾನಕ್ಕೆ ಸಂಬಂಧಿಸಿದ ಅಸಾಮಾನ್ಯ ಬದಲಾವಣೆಗಳು, ಪ್ರಕೃತಿ ನಾಶ ಹಾಗೂ ವಿಪರೀತ ಪ್ಲಾಸ್ಟಿಕ್ ಬಳಕೆಯಿಂದಾಗಿ ವಿಜ್ಞಾನಿಗಳಿಗೆ ಮಾನ್ಸೂನ್ಗಳ ನಿಯತಾಂಕಗಳನ್ನು (ಪ್ಯಾರಾಮೀಟರ್ಗಳನ್ನು) ಆಧರಿಸಿ ಮಳೆಯ ಮುನ್ಸೂಚನೆಗಳನ್ನು ನಿಖರವಾಗಿ ನಿರ್ಧರಿಸುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.
ಸಸ್ಯಶಾಸ್ತ್ರ ವಿಭಾಗದ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಟಿ ಮಾತನಾಡಿ, ಜೀವ ವೈವಿಧ್ಯತೆಯ ಸಂರಕ್ಷಣೆ ಮತ್ತು ಅದರ ಮಹತ್ವದ ಕುರಿತು ವಿವರಿಸಿ, ಮಳೆನೀರಿನ ಕೊಯ್ಲಿನ ಅವಶ್ಯಕತೆಯ ಬಗ್ಗೆಯೂ ಚರ್ಚಿಸಿದರು.
ಕೇಂದ್ರದ ಕ್ಯುರೇಟರ್ ಜಗನ್ನಾಥ್ ಅವರು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ತಾರಾಲಯದ ಪಕ್ಕದಲ್ಲಿ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು.
ಶುಭೋದಯ ವಿದ್ಯಾಲಯದ ಪ್ರೌಢಶಾಲಾ ವಿಭಾಗದ ಅಧ್ಯಾಪಕಿ ಸೌಮ್ಯಲತಾ ಉಪಸ್ಥಿತರಿದ್ದರು. ಸಹನ ಸ್ವಾಗತಿಸಿ, ಶ್ರೀಶಾಂತ್ ಶೆಟ್ಟಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮೂಡುಶೆಡ್ಡೆಯ ಶುಭೋದಯ ವಿದ್ಯಾಲಯದ ಪ್ರೌಢಶಾಲಾ ವಿಭಾಗದ ಸುಮಾರು 130 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದರು.
