ಪುತ್ತೂರಿನ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು — ಆರೋಪಿ ಬಂಧನ
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆ ಪೊಲೀಸರು ಮನೆ ಕಳ್ಳತನದ ಪ್ರಕರಣವನ್ನು ಕೇವಲ ಕೆಲವು ದಿನಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 12.10.2025 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯೊಳಗೆ, ಪುತ್ತೂರು ತಾಲೂಕಿನ ನಿವಾಸಿ ಶ್ರೀಮತಿ ರೇವತಿ ಅವರ ಮನೆಯಲ್ಲಿ ನಡೆದ ಕಳ್ಳತನದ ಪ್ರಕರಣದ ಕುರಿತು, ಚಿನ್ನದ ಬಳೆ (1), ಕಿವಿಯೋಲೆ (1), ಚಿನ್ನದ ಸರ (1) ಹಾಗೂ ನಗದು ಹಣ ಕಳುವಾಗಿದೆ ಎಂದು ದೂರು ದಾಖಲಿಸಲಾಯಿತು.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 89/2025, ಕಲಂ 331(3), 305 ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಆರೋಪಿಯಾಗಿ ಪ್ರವೀಣ್ (27), ಸಿಟಿ ಗುಡ್ಡೆ ಮನೆ, ಕಬಕ ಗ್ರಾಮ, ಪುತ್ತೂರು ತಾಲೂಕು ಎಂಬಾತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ತನಿಖೆ ವೇಳೆ ಆರೋಪಿಯಿಂದ ಕಳವು ಮಾಡಿದ ಚಿನ್ನಾಭರಣ ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪುತ್ತೂರು ನಗರ ಪೊಲೀಸರು ತಿಳಿಸಿದ್ದಾರೆ.