Home Mangalorean News Kannada News ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನಾ ಪ್ರದರ್ಶನ 

ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನಾ ಪ್ರದರ್ಶನ 

Spread the love

ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನಾ ಪ್ರದರ್ಶನ 

ಪೆಟ್ರೋಲ್ ಡೀಸೆಲ್ ದರವನ್ನು ವಿಪರೀತವಾಗಿ ಏರಿಸಿ, ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಕೇಂದ್ರ ದ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ CPIM ಮಂಗಳೂರು ನಗರ ದಕ್ಷಿಣ ಸಮಿತಿಯ ನೇತ್ರತ್ವದಲ್ಲಿ  ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡುತ್ತಾ,  ಜನರಲ್ಲಿದ್ದ ಅತ್ರಪ್ತಿಯ ಲಾಭವನ್ನು ಪಡೆದು ಹಾಗೂ ಅವರಲ್ಲಿನ ಭಾವನೆಗಳನ್ನು ಕೆರಳಿಸಿ, ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ನೇತ್ರತ್ವದ ಸರಕಾರವು ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ತತ್ವಗಳಿಗೆ ಭಾರೀ ಅಪಾಯ ತಂದೊಡ್ಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆಗಳು ಪಾತಾಳಕ್ಕೆ ಕುಸಿದಿದ್ದರೂ ನಮ್ಮ ದೇಶದಲ್ಲಿ ತೈಲ ಬೆಲೆಗಳು ಮಾತ್ರ ಒಂದೇ ಸಮನೆ ಏರುತ್ತಿದೆ.ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಜನಸಾಮಾನ್ಯರ ಬದುಕಿಗೆ ನೇರವಾಗಿ ದುಷ್ಪರಿಣಾಮ ಬೀರಲಿದೆ.ಕೋರೋನಾ ಸಂಕಷ್ಟದ ಈ ಕಾಲದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಜನರ ರಕ್ತ ಹೀರುವ ಇಂತಹ ಸರಕಾರದ ವಿರುದ್ಧ ಜನತೆ ಹೆಚ್ಚೆಚ್ಚು ಸಂಘಟಿತರಾಗಬೇಕೆಂದು  ಹೇಳಿದರು.

CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, *ಸುಳ್ಳು ಹೇಳುವುದನ್ನೇ ತನ್ನ ಜಾಯಾಮಾನವನ್ನಾಗಿಸಿದ ಬಿಜೆಪಿ ಸಂಘಪರಿವಾರ ನಡೆಸುತ್ತಿರುವ ದುಷ್ಕ್ರತ್ಯಗಳು ದೇಶವನ್ನು ಅದೋಗತಿಗೆ ತಳ್ಳುತ್ತಿದೆ.ಮೋದಿ ಪ್ರಧಾನಿಯಾದರೆ ಕಪ್ಪು ಹಣ ತರುವುದಾಗಿ,15 ಲಕ್ಷ ಹಣ ಜನರ ಖಾತೆಗೆ ಹಾಕುವುದಾಗಿ,ಬೆಲೆಯೇರಿಕೆ ತಗ್ಗಿಸುವುದಾಗಿ,ಪೆಟ್ರೋಲ್ ದರ 30 ರೂ.ಗೆ ಇಳಿಸುವುದಾಗಿ ಬಡಾಯಿ ಕೊಚ್ಚಿಕೊಂಡವರು ಇಂದು ಪೆಟ್ರೋಲ್ ದರ ಆಕಾಶದೆತ್ತರಕ್ಕೆ ಏರುತ್ತಿದ್ದರೂ ಬಾಯಿ ಬಿಡುತ್ತಿಲ್ಲ.ಕೋರೋನಾ ದಿಂದಾಗಿ ಇಡೀ ದೇಶವೇ ತತ್ತರಿಸುತ್ತಿದ್ದು,ಜನಸಾಮಾನ್ಯರ ಬದುಕನ್ನು ಹೇಳತೀರದಾಗಿದೆ. ಅಂತಹುದರಲ್ಲಿ ಕೇಂದ್ರ ಸರಕಾರ ಜನರ ಪರವಾಗಿ ನಿಲ್ಲುವ ಬದಲು ಕಾರ್ಪೊರೇಟ್ ಕಂಪೆನಿಗಳ ಹಿತಕಾಯುತ್ತಿದೆ* ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ವಾಗಿ ಮಾತನಾಡಿದ CPIM ಯುವನಾಯಕರಾದ ಸಂತೋಷ್ ಬಜಾಲ್ ರವರು, *ಕಳೆದ 20 ದಿನಗಳಿಂದ ಪೆಟ್ರೋಲ್ ಡೀಸೆಲ್ ದರ ಒಂದೇ ಸಮನೆ ಏರುತ್ತಿದ್ದರೂ ಆಡಳಿತ ನಡೆಸುವ ಬಿಜೆಪಿಯ ಸಂಸದರು ಶಾಸಕರು ಬಾಯಿ ಬಿಡುತ್ತಿಲ್ಲ.ಅಂದು ಬೆಲೆಯೇರಿಕೆಯ ವಿರುದ್ಧ ಕಪಟ ನಾಟಕವಾಡಿದ ಬಿಜೆಪಿಗರು ಇಂದು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದ್ದಾರೆ* ಎಂದು ಹೇಳಿದರು.

ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ವಾಸುದೇವ ಉಚ್ಚಿಲ್,DYFI ಜಿಲ್ಲಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, CPIM ಮಂಗಳೂರು ನಗರ ಮುಖಂಡರಾದ ಸುರೇಶ್ ಬಜಾಲ್, ದಿನೇಶ್ ಶೆಟ್ಟಿ, CITU ನಾಯಕರಾದ ಸ್ಟಾನ್ಲಿ ನೊರೋನ್ಹಾ, ಅನ್ಸಾರ್, ಸಂತೋಷ್ ಆರ್.ಎಸ್, ಹರೀಶ್ ಪೂಜಾರಿ, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಪ್ರಶಾಂತ್ ಉರ್ವಾಸ್ಟೋರ್, ರಘುವೀರ್, ಕೃಷ್ಣ ಮುಂತಾದವರು ಭಾಗವಹಿಸಿದ್ದರು.


Spread the love

Exit mobile version