ಫೆ.1, ಕನ್ನಡ ಸಂಘಟನೆಗಳಿಂದ ದೆಹಲಿ ಚಲೋ ಕಾರ್ಯಕ್ರಮ

Spread the love

ಫೆ.1, ಕನ್ನಡ ಸಂಘಟನೆಗಳಿಂದ ದೆಹಲಿ ಚಲೋ ಕಾರ್ಯಕ್ರಮ

ರಾಮನಗರ: ಮೇಕೆದಾಟು ಕುಡಿಯುವ ನೀರು ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.1 ರಂದು ನೂರಕ್ಕೂ ಹೆಚ್ಚು ಕನ್ನಡ ಸಂಘಟನೆಗಳ ವತಿಯಿಂದ ದೆಹಲಿ ಚಲೋ ಕಾರ್ಯಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೆಕೆದಾಟು ಹೋರಾಗಾರರ ಸಮಿತಿಯ ಅಧ್ಯಕ್ಷ ನಿಲೇಶ್‌ಗೌಡ ತಿಳಿಸಿದರು.

ನಗರದ ಜಾನಪದಲೋಕದ ಬಳಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಮೇಕೆದಾಟು ಯೋಜನೆ ನೆನೆಗುದಿಗೆ ಬಿದ್ದಿದೆ. ಬಿಜೆಪಿ ಪಕ್ಷದಿಂದ ರಾಜ್ಯದ 26 ಜನ ಸಂಸದರು ಪ್ರತಿನಿಧಿಸುತ್ತಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತರಲು ಆಗುತ್ತಿಲ್ಲ. ಇದು ನಮ್ಮ ರಾಜ್ಯದ ಹೀನಾಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದೀಗ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು ಇಲ್ಲಿನ ಬಿಜೆಪಿ ಸರ್ಕಾರ ಕೇಂದ್ರ ಮೇಲೆ ಒತ್ತಡ ತಂದು ಯೋಜನೆಯನ್ನು ಜಾರಿಗೆ ತರುವಲ್ಲಿ ಆಸಕ್ತಿ ತೋರಿಸಬೇಕು ಎಂದು ಒತ್ತಾಯಿಸಿದರು.

ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ರಾಜ್ಯದ ಬಿಜೆಪಿ ಮುಖಂಡರು ಯೋಜನೆ ಅನುಷ್ಠಾನದ ಬಗ್ಗೆ ಆಸಕ್ತಿ ತೋರಿಸುವಂತೆ ಮಾತನಾಡಿದರೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಬಿಜೆಪಿ ಪಕ್ಷದ ಇಬ್ಬಗೆಯ ನೀತಿ ತೋರಿಸುತ್ತಿದೆ ಎಂದು ಟೀಕಿಸಿದರು.

ಈಗಾಗಲೇ ಮೇಕೆದಾಟು ಹೋರಾಟ ಸಮಿತಿ ವತಿಯಿಂದ ಸಾಕಷ್ಟು ಹೋರಾಟ ಮಾಡಲಾಗಿದ್ದು, ಇದೀಗ ಅಂತಿಮವಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿ ಅದೆ ದಿನ ರಾಷ್ಟ್ರಪತಿಗಳಿಗೆ ಯೋಜನೆ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಲು ಸಮಯ ನಿಗದಿಯಾಗಿದೆ. ನಮ್ಮ ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸಹಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ನವನಿರ್ಮಾಣ ವೇದಿಕೆ ಅಧ್ಯಕ್ಷ ವಿ.ನರಸಿಂಹಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರ ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರ ಕುಡಿಯುವ ನೀರಿಗೆ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು. ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿಯದಿದ್ದರೆ, ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಪ್ಪುಬಟ್ಟೆ ಪ್ರದರ್ಶಿಸುವುದು ಹಾಗೂ ಕಪ್ಪು ಮಸಿ ಬಳಿಯುವುದು ಕರ್ನಾಟಕ ಬಂದ್ ಮಾಡುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮತ್ತು ಕಾರ್ಮಿಕ ಹೋರಾಟಗಾರ ಬೆಟ್ಟಸ್ವಾಮಿಗೌಡ ಮಾತನಾಡಿ, ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬೆಂಗಳೂರು ನಗರ ಸೇರಿದಂತೆ ಆರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕೆನ್ನುವುದು ನಮ್ಮೆಲ್ಲರ ಒತ್ತಾಯ. ಈ ಹೋರಾಟಕ್ಕೆ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಸಿ.ಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭೀಮಾನಿ ಸೇನೆ ಅಧ್ಯಕ್ಷ ನಿಂಗರಾಜಗೌಡ, ಚಂದ್ರಮೌಳೇಶ್ವರ ಟ್ರಸ್ಟ್  ಅಧ್ಯಕ್ಷ ಗೋವಿಂದರಾಜು ಮಾತನಾಡಿದರು.

ಕರ್ನಾಟಕ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಎಸ್.ಶಿವಶಂಕರ್, ನಮ್ಮ ಕರ್ನಾಟಕ ಕಟ್ಟಡ ಕಾರ್ಮಿಕ ಸೇವಾ ಸಂಘದ ರಾಜ್ಯಾಧ್ಯಕ್ಷ ನಾಗಮಂಗಲ ಕುಮಾರ್, ಕರುನಾಡ ಕಾರ್ಮಿಕ ಸೇನೆ ರಾಜ್ಯಾಧ್ಯಕ್ಷ ಚೇತನ್ ಕನ್ನಡಿಗ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ನಾರಾಯಣ್ ಸೇರಿದಂತೆ ಹಲವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


Spread the love