
ಬಹುದಿನದ ಬೇಡಿಕೆಗೆ ಮನ್ನಣೆ: ಮತ್ಸ್ಯಗಂಧ ಎಕ್ಸ್ ಪ್ರೆಸ್ ಗೆ ಬಾರ್ಕೂರಿನಲ್ಲಿ ನಿಲುಗಡೆಗೆ ಆದೇಶ
ಉಡುಪಿ: ಜಿಲ್ಲೆಯ ಹಲವು ಸಮಯದ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವಾಲಯ ಬಾರ್ಕೂರಿನಲ್ಲಿ ಮತ್ಸ್ಯಗಂಧ ಎಕ್ಸಪ್ರೆಸ್ಗೆ ನಿಲುಗಡೆ ಸಹಿತ ನೇತ್ರಾವತಿ ಎಕ್ಸ್ ಪ್ರೆಸ್ ಗೆ ಕುಂದಾಪುರದಲ್ಲಿ ಮತ್ತು ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಸಪ್ರೆಸ್ಗೆ ಕಡೂರಿನಲ್ಲಿ ನಿಲುಗಡೆಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗದ ಜನರ ಬೇಡಿಕೆಯನ್ನು ಕೇಂದ್ರ ಸರ್ಕಾರದ ರೇಲ್ವೆ ಇಲಾಖೆ ಈಡೇರಿಸಿದೆ. ಈ ಕೆಳಗಿನ ರೈಲುಗಳ ನಿಲುಗಡೆಗೆ ಬಹುದಿನಗಳಿಂದ ಜನರ ಬೇಡಿಕೆಯಿದ್ದು ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ರೇಲ್ವೆ ಸಚಿವರಿಗೆ ಪತ್ರ ಬರೆದು, ಸಭೆ ನಡೆಸಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಕೆಳಗಿನ ರೈಲುಗಳಿಗೆ, ಕೆಳಕಂಡ ರೇಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಆದೇಶವನ್ನು ಹೊರಡಿಸಿದ್ದಾರೆ.
- ಕುಂದಾಪುರದಲ್ಲಿ ನೇತ್ರಾವತಿ ಎಕ್ಸಪ್ರೆಸ್ (Train 13645/46) ನಿಲುಗಡೆ ಬಗ್ಗೆ ಸಾರ್ವಜನಿಕರಿಂದ ಬಹಳ ಒತ್ತಾಯವಿತ್ತು, ಈ ಬಗ್ಗೆ ಕುಂದಾಪುರದ ರೇಲ್ವೆ ಹೋರಾಟ ಸಮಿತಿ ಮತ್ತು ಸಾರ್ವಜನಿಕರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿ ಮನವಿ ಮಾಡಿ ಒತ್ತಾಯಿಸಿತ್ತು. ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರೊಂದಿಗೆ ಸಭೆ ನಡೆಸಿ ನೇತ್ರಾವತಿ ಎಕ್ಸಪ್ರೆಸ್ನ್ನು ಕುಂದಾಪುರದಲ್ಲಿ ನಿಲುಗಡೆಗೊಳಿಸಲು ಕ್ರಮ ಜರುಗಿರುಸುವಂತೆ ಮನವಿ ಮಾಡಿದ್ದರು. ಕರೋನಾ ಸಮಯದಲ್ಲಿ ತಿರುವನಂತಪುರ ಮುಂಬಯಿ ಎಕ್ಸಪ್ರೆಸ್ಗೆ (ನೇತ್ರಾವತಿ ಎಕ್ಸಪ್ರೆಸ್) ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ರದ್ದಾಗಿತ್ತು. ತದನಂತರ ನಿಲುಗಡೆ ಪ್ರಾರಂಭವಾಗದೆ ಕುಂದಾಪುರದಿಂದ ಮುಂಬಯಿ ಮತ್ತು ಗೋವಾಕ್ಕೆ ತೆರಳುವ ಮತ್ತು ಮುಂಬಯಿ ಮತ್ತು ಗೋವಾದಿಂದ ಕುಂದಾಪುರಕ್ಕೆ ಸಂಚರಿಸುವ ಹಲವಾರು ಪ್ರಯಾಣಿಕರಿಗೆ ಅನಾನುಕೂಲತೆಯಾಗಿತ್ತು. ಪ್ರಯಾಣಿಕರ ಈ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಈ ಭಾಗದ ಸಂಸದೆ ಹಾಗೂ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಸಕರಾತ್ಮಕವಾಗಿ ಸ್ಪಂದಿಸಿ ಪ್ರಯಾಣಿಕರಿಗೆ ಅನುಕೂಲ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಕುರಿತು ಕೇಂದ್ರ ರೇಲ್ವೆ ಸಚಿವರಲ್ಲಿ ಮನವಿ ಮಾಡಿ, ಪ್ರಯಾಣಿಕರ ಸಮಸ್ಯೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಪರಿಹರಿಸಿದ್ದಾರೆ. ನೇತ್ರಾವತಿ ಎಕ್ಷಪ್ರೆಸ್ಗೆ ಕುಂದಾಪುರದಲ್ಲಿ ನಿಲುಗಡೆಗೆ ನೀಡಿ ಕೇಂದ್ರ ರೇಲ್ವೆ ಸಚಿವಾಲಯ ಆದೇಶಿಸಿದೆ.
- ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಸಪ್ರೆಸ್ಗೆ (17309/10) ಕಡೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಲು, ಚಿಕ್ಕಮಗಳೂರ ಮತ್ತು ಕಡೂರಿನ ಭಾಗದ ಪ್ರಯಾಣಿಕರು ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿ ಒತ್ತಾಯ ಮಾಡಿದ್ದರು. ಬೆಂಗಳೂರಿನಿಂದ ಗೋವಾಕ್ಕೆ /ಗೋವಾದಿಂದ ಬೆಂಗಳೂರಿಗೆ ತೆರಳುವ ಈ ರೈಲಿಗೆ ಕಡೂರಿನಲ್ಲಿ ನಿಲುಗಡೆ ನೀಡುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕೇಂದ್ರದ ರೇಲ್ವೆ ಸಚಿವರಿಗೆ ಮನವರಿಕೆ ಮಾಡಿದ್ದರು. ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ಕೇಂದ್ರದ ರೇಲ್ವೆ ಸಚಿವರು ರೈಲು ಸಂಖ್ಯೆ 17309/10 (ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಪಪೆಸ್)ಗೆ ಕಡೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಿದ್ದಾರೆ.
- ಮಂಗಳೂರಿನಿಂದ ಮುಂಬೈ/ಮುಂಬೈನಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ – ಮಂಗಳೂರು ಮತ್ಯಗಂದ ಎಕ್ಸಪ್ರೆಸ್ಗೆ (12616/20) ಉಡುಪಿ ಜಿಲ್ಲೆಯ ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡುವ ಬಗ್ಗೆಯೂ ಪ್ರಯಾಣಿಕರಿಂದ ಬೇಡಿಕೆಯಿತ್ತು. ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ಸ್ಯಗಂದ ರೈಲು ಬಾರ್ಕೂರು ನಿಲುಗಡೆಗೊಳ್ಳವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಹೋಟೆಲ್ ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಈ ನಿಲುಗಡೆ ಬಹಳ ಉಪಯುಕ್ತವಾಗಲಿವೆ. ಇವೆಲ್ಲವನ್ನು ಪರಿಗಣಿಸಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರ ಪ್ರಯತ್ನದಿಂದಾಗಿ ರೇಲ್ವೆ ಇಲಾಖೆ ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಅನುಮತಿಯನ್ನು ಹೊರಡಿಸಿದೆ.
- ಬೆಂಗಳೂರಿನಿಂದ ರಾಜಸ್ಥಾನದ ಬಾರ್ಮರ್ ಸಂಪರ್ಕಕೊಂಡಿಯಾಗಿದ್ದ ಯಶವಂತಪುರ-ಬಾರ್ಮೆರ್ ರೈಲು ಗಾಡಿಗೆ (04806/05) ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲುಗಡೆ ಇಲ್ಲದ ಕಾರಣ ಅನಾನುಕೂಲತೆಯಾಗಿತ್ತು. ಈ ರೈಲು ಗಾಡಿಗೆ ಬಿರೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸಲು ಸ್ಥಳೀಯ ಶಾಸಕರು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ರೇಲ್ವೆ ಸಚಿವರಲ್ಲಿ ಮನವಿ ಮಾಡಿದ್ದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ರೇಲ್ವೆ ಸಚಿವರು ಸದರಿ ರೈಲಿಗೆ ಬಿರೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಆದೇಶಿಸಿದ್ದಾರೆ. ಈ ಹಿಂದೆ ರೈಲುಗಾಡಿಗೆ ತುಮಕೂರು, ಅರಸಿಕೇರೆ ಮತ್ತು ದಾವಣೆಗೆರೆ ರೇಲ್ವೆ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೆ ಆದೇಶವಿದ್ದು, ಈಗ ಮಲೆನಾಡಿನ ಹೆಬ್ಬಾಗಿಲು ಬೀರೂರು ನಿಲ್ಲಾಣದಲ್ಲಿಯೂ ಸಹ ಈ ರೈಲು ನಿಲ್ಲಲಿದೆ. ಚಿಕ್ಕಮಗಳೂರಿಗೆ ರಾಜಸ್ಥಾನದಿಂದ ಕಾರ್ಮಿಕರು ಹಾಗೂ ಉದ್ಯಮಿಗಳು ಆಗಮಿಸುತ್ತಿದ್ದು, ಉತ್ತರಭಾರತದಿಂದ ಚಿಕ್ಕಮಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಹಾಗೂ ವ್ಯಾಪಾರೋದ್ಯಮಕ್ಕೆ ಬಹಳ ಅನುಕೂಲವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗೆ ಕರ್ನಾಟಕ ರಾಜ್ಯದ ಹತ್ತಾರು ಹಿತಾಸಕ್ತಿಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕಾಲಕಾಲಕ್ಕೆ ಸಾರ್ವಜನಿಕರಿಗೆ ಅನುಕೂಲಕರವಾದ ಸವಲತ್ತುಗಳನ್ನು ಒದಗಿಸಿದೆ. ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆಯವರು ಸಮರ್ಪಕ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈ ಎಲ್ಲಾ ರೈಲುಗಳ ನಿಲುಗಡೆ ಆದೇಶದಿಂದ ವಿಶೇಷವಾಗಿ ಕೃಷಿ ಉತ್ಪನ್ನಗಳ ಸಾಗಾಟ ಮತ್ತು ಕರಾವಳಿ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ, ದೂರದೂರಿನ ಹೋಟೆಲ್ ಉದ್ಯಮ, ಮತ್ತು ಪ್ರವಾಸೋಧ್ಯಮಕ್ಕೆ ಉತ್ತೇಜನ ದೊರೆತಿದೆ.
ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರಿಗೆ ಹಾಗೂ ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.