
ಬೇಲೂರು ಮರಳು ಮಾಫಿಯಾಕ್ಕೆ ಶೀಘ್ರ ಕಡಿವಾಣ
ಬೇಲೂರು: ತಾಲೂಕಿನಲ್ಲಿ ಮರಳು ಮಾಫಿಯ ಹೆಚ್ಚು ನಡೆಯುತ್ತಿದ್ದು, ಇದಕ್ಕೆ ಈ ಹಿಂದೆ ಇದ್ದ ಅಧಿಕಾರಿಗಳ ವರ್ತನೆ ಅಥವಾ ಜನಪ್ರತಿನಿಧಿಗಳ ಕೈಜೋಡಿಸುವಿಕೆ ಕಾರಣವೋ ತಿಳಿಯದು ಎಂದು ನೂತನ ಶಾಸಕ ಎಚ್. ಕೆ. ಸುರೇಶ್ ಹೇಳಿದರು.
ತಾಲ್ಲೂಕು ಪಂಚಾಯ್ತಿಯಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಡವರು ಮನೆ ಕಟ್ಟಲು ಮರಳನ್ನು ತಂದರೆ ಅದನ್ನು ಹಿಡಿದು ಅವರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಮರಳಿನ ಲಾರಿಗಳು ಟಿಪ್ಪರ್ಗಳ ಓಡಾಟದಿಂದ ರಸ್ತೆಗಳೆಲ್ಲ ಹಾಳಾಗಿದ್ದು ಸಾರ್ವಜನಿಕರು ತಿರುಗಾಡಲು ಹೆದುರುತ್ತಿದ್ದಾರೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ, ಅಕ್ರಮ ಮರಳು ದಂಧೆಕೋರರನ್ನು ಹಿಡಿದು ಕಾನೂನಿಗೆ ಒಪ್ಪಿಸುವ ಕೆಲಸ ತಕ್ಷಣ ಮಾಡಬೇಕು ಎಂದರು.
ಬಗರ್ ಹುಕುಂ ಸಾಗುವಳಿ ಫಲಾನುಭವಿಗಳಿಗೆ ಭೂಮಿಯನ್ನು ನೀಡದೆ ಹಣವಂತರಿಗೆ, ಬಲಾಢ್ಯರಿಗೆ ಹಣಕ್ಕಾಗಿ ಮಾರಿಕೊಂಡು ಬಡವರನ್ನು ಬಡವರಾಗೆ ಮಾಡಿದ್ದಾರೆ. ಇದರಿಂದ ಇಡೀ ರಾಜ್ಯವೇ ತಲೆ ತಗ್ಗಿಸುವ ಕೆಲಸವಾಗಿದೆ, ಅದನ್ನು ಸಮಗ್ರ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಕಾನೂನಿಗೆ ಗುರಿ ಮಾಡುವುದೇ ಮುಖ್ಯವಾದ ಕೆಲಸವಾಗಿದೆ.
ಇನ್ನು ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ ತಡೆಯದೆ ಬಡ ಕುಟುಂಬಗಳು ಬೀದಿಗೆ ಬರುತ್ತಿದ್ದು ಮಹಿಳೆಯರ ಗೋಳು ಕೇಳತೀರದಾಗಿದೆ, ಲಂಚಕ್ಕಾಗಿ ಬದುಕುವ ಅಧಿಕಾರಿಗಳಿಗೆ ಇದು ಮೊದಲ ಎಚ್ಚರಿಕೆ, ಅಬಕಾರಿ ಇಲಾಖೆ ಸಿ ಎಲ್ ೭ ಮದ್ಯದ ಅಂಗಡಿಗಳನ್ನು ಬೀದಿ ಬೀದಿಗಳಲ್ಲಿ ತೆರೆಯಲು ಅನುಮತಿ ನೀಡಿದ್ದು, ಮರ್ಯಾದಸ್ಥರು, ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆದಾಡುವುದೇ ಕಷ್ಟಕರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಪಾಲಕ ಅಭಿಯಂತರ ಕಚೇರಿಯು ನಾಮಕಾವಸ್ಥೆಗೆ ಇದೆ, ರಸ್ತೆಗಳೆಲ್ಲ ಹದೆಗೆಟ್ಟಿದ್ದು, ಅಧಿಕಾರಿಗಳು ತೇಪೆ ಹಾಕುವ ಕಳಪೆ ಕೆಲಸ ಮಾಡುತ್ತಿದ್ದಾರೆ, ಅದನ್ನು ಪ್ರಶ್ನಿಸಲು ಹೋದರೆ ಗುತ್ತಿಗೆದಾರರನ್ನು ಎತ್ತಿ ಕಟ್ಟುತ್ತಾರೆ, ಹಿಂದಿನ ಕೆಲಸವನ್ನು ನೂತನ ಶಾಸಕರು ಕಾಮಗಾರಿಗಳನ್ನು ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ಇಲ್ಲ ಸಲ್ಲದೆ ಹೇಳಿಕೆ ಕೊಡಿಸುತ್ತಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಅರಿತಿದ್ದು ನನಗೆ ಗುಣಮಟ್ಟದ ಕಾಮಗಾರಿ ಬೇಕು ಅದರಲ್ಲಿ ರಾಜಿ ಪ್ರಶ್ನೆಯೆ ಇಲ್ಲ ಎಂದರು.
ತಾಲೂಕಿನಲ್ಲಿ ಭ್ರಷ್ಟಾಚಾರ ಅತೀ ಹೆಚ್ಚಾಗಿ ತಾಂಡವಾಡುತ್ತಿದ್ದು ತಾಲ್ಲೂಕು ಕಚೇರಿಯಲ್ಲಿ ಸತ್ತವರ ಹೆಸರಿನಲ್ಲಿ ಖಾತೆ ಮಾಡಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿದ್ದು, ಅದನ್ನು ತಕ್ಷಣ ನಿಲ್ಲಿಸದಿದ್ದರೆ ಅಧಿಕಾರಿಗಳು ನ್ಯಾಯಾಲದ ಕಟಕಟೆ ಹತ್ತುವ ಕೆಲಸಕ್ಕೆ ಸಿದ್ದರಿರಬೇಕು, ನಮಗೆ ಪ್ರಾಮಾಣಿಕ ಕೆಲಸ ನಡೆಯಬೇಕು ಎಂದರು.
ಸಭೆಯಲ್ಲಿ ತಾಲ್ಲೂಕು ದಂಡಧಿಕಾರಿ ಮಮತಾ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹನಾಧಿಕಾರಿ ಸುನಿತಾ, ಹಳೇಬೀಡು, ಅರೇಹಳ್ಳಿ ವೃತ್ತ ನೀರಿಕ್ಷಕ ಶ್ರೀಕಾಂತ್, ಇಲಾಖೆ ಅಧಿಕಾರಿಗಳು ಇತರರು ಇದ್ದರು.