
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ – ಪ್ರಬಲ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ?
ಉಡುಪಿ: ಬ್ಲಾಕ್ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರ ನೇಮಕವಾಗುತ್ತಿದ್ದಂತೆ ಪ್ರಬಲ ಆಕಾಂಕ್ಷಿಯಾಗಿದ್ದ ಕೃಷ್ಣಮೂರ್ತಿ ಆಚಾರ್ಯ ಬೆಂಬಲಿಗರು ಪಕ್ಷದ ನಿರ್ಧಾರದ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ನಗರ ಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಕೂಡ ಇನ್ನೊಂದು ಕಡೆಯಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಮೇಶ ಕಾಂಚನ್ ಅವರನ್ನು ಬ್ಲಾಕ್ ಅಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ನೂತನ ಬ್ಲಾಕ್ ಅಧ್ಯಕ್ಷರ ನೇಮಕಾತಿ ಆದೇಶ ಹೊರಬೀಳುತ್ತಿದ್ದಂತೆ ಕೆ. ಕೃಷ್ಣ ಮೂರ್ತಿ ಆಚಾರ್ಯ ಅವರ ಬೆಂಬಲಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು ಪಕ್ಷಕ್ಕೆ ಸೋಮವಾರ ಕೃಷ್ಣಮೂರ್ತಿ ಆಚಾರ್ಯ ಹಾಗೂ ಅವರ ಬೆಂಬಲಿಗರು ರಾಜೀನಾಮೆ ಸಲ್ಲಿಸವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ನಾಯಕರ ಸಭೇಯಲ್ಲಿ ಕೂಡ ರಮೇಶ್ ಕಾಂಚನ್ ಮತ್ತು ಕೃಷ್ಣಮೂರ್ತಿ ಆಚಾರ್ಯ ಅವರ ಬೆಂಬಲಿಗರು ಡಿಕೆ ಶಿವಕುಮಾರ್ ಅವರ ಮುಂದೆ ಒಟ್ಟಾಗಿ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ನಡೆಸಿದ್ದರು. ಈ ವೇಳೆ ಕೃಷ್ಣಮೂರ್ತಿ ಆಚಾರ್ಯರಿಗೆ ಬೇರೆ ಹುದ್ದೆ ನೀಡುವ ಭರವಸೆಯನ್ನು ಡಿಕೆಶಿ ನೀಡಿದ್ದರು ಎನ್ನಲಾಗಿದೆ.