ಮಂಗಳೂರು: ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾದೇಶಿ ಪ್ರಜೆಗಳು ಪತ್ತೆ; ಗಡೀಪಾರು ಪ್ರಕ್ರಿಯೆಗೆ ಎಫ್ಆರ್ಆರ್ಒ ಚಾಲನೆ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸ್ತವ್ಯವಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರ ಪೊಲೀಸರು ಜುಲೈ 9, 2026ರಂದು ದಾಳಿ ನಡೆಸಿದರು.

ದಾಳಿಯ ವೇಳೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಒಟ್ಟು 54 ಕಾರ್ಮಿಕರ ಗುರುತಿನ ದಾಖಲೆಗಳನ್ನು ಪರಿಶೀಲಿಸಲಾಯಿತು. ಸುದೀರ್ಘ ಪರಿಶೀಲನೆಯ ಬಳಿಕ ಅವರಲ್ಲಿ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿ ವಾಸ್ತವ್ಯ ಹೂಡಿರುವುದು ದೃಢಪಟ್ಟಿತು.
ಬಂಧಿತರನ್ನು ಈ ಕೆಳಕಂಡಂತೆ ಗುರುತಿಸಲಾಗಿದೆ:
- ಎಂ.ಡಿ. ಮುಕ್ತಾರ್ ಅಲಿ (36), ಲೇಟ್ ಲಾಲ್ ಮಹಮ್ಮದ್ ಅವರ ಪುತ್ರ, ಉತ್ತರ ಕನಪಾರಾ ಚಾರ್, ಆಶರಿಯಾದಹ, ಗೋದಾಗರಿ, ರಾಜಶಾಹಿ ವಿಭಾಗ, ಬಾಂಗ್ಲಾದೇಶ.
- ಎಂ.ಡಿ. ರಕೀಬುರ್ ಹೊಸೇನ್ (44), ಎಂ.ಡಿ. ಮತಿಯುರ್ ರಹಮಾನ್ ಅವರ ಪುತ್ರ, ಮತಿಕಟಾ, ಗೋದಾಗರಿ, ರಾಜಶಾಹಿ, ಬಾಂಗ್ಲಾದೇಶ.
- ಎಂ.ಡಿ. ಅಜರುಲ್ ಇಸ್ಲಾಂ (36), ಎಂ.ಡಿ. ಅಕ್ರಮುಲ್ ಹಕ್ ಅವರ ಪುತ್ರ, ಮತಿಕಟಾ, ಗೋದಾಗರಿ, ರಾಜಶಾಹಿ, ಬಾಂಗ್ಲಾದೇಶ.
- ಎಂ.ಡಿ. ಜಾಹಿದ್ ಹೊಸೇನ್ (18), ಎಂ.ಡಿ. ನುರುಲ್ ಇಸ್ಲಾಂ ಅವರ ಪುತ್ರ, ಮತಿಕಟಾ, ಗೋದಾಗರಿ, ರಾಜಶಾಹಿ, ಬಾಂಗ್ಲಾದೇಶ.
- ಎಂ.ಡಿ. ಬೆಲಾಲ್ ಹೊಸೇನ್ (36), ಎಂ.ಡಿ. ಐನಲ್ ಹಕ್ ಅವರ ಪುತ್ರ, ಉತ್ತರ ಕನಪಾರಾ ಚಾರ್, ಆಶರಿಯಾದಹ, ಗೋದಾಗರಿ, ರಾಜಶಾಹಿ ವಿಭಾಗ, ಬಾಂಗ್ಲಾದೇಶ.
- ಎಂ.ಡಿ. ಹಸಿಬುಲ್ ಹಸನ್ ಶಾಂತೋ (37), ಎಂ.ಡಿ. ನಜಿಮುದ್ದೀನ್ ಅವರ ಪುತ್ರ, ಪಿರಿಜ್ಪುರ್, ಗೋದಾಗರಿ, ರಾಜಶಾಹಿ, ಬಾಂಗ್ಲಾದೇಶ.
- ಎಂ.ಡಿ. ಸಮೆಯುಲ್ ಹಸನ್ (23), ಎಂ.ಡಿ. ಶಾಹಿದು ಲಿಟನ್ ಬಾಬು ಅವರ ಪುತ್ರ, ಚರಮ್ತೋಲಾ, ಚಾರ್ ಆಶರಿಯಾದಹ, ಗೋದಾಗರಿ, ರಾಜಶಾಹಿ, ಬಾಂಗ್ಲಾದೇಶ.
- ಎಂ.ಡಿ. ಸೈಬುರ್ ರಹಮಾನ್, ಲಾಲ್ ಮಹಾಮನ್ ಅವರ ಪುತ್ರ, ಉತ್ತರ ಕನಪಾರಾ, ಚಾರ್ ಆಶರಿಯಾದಹ, ಗೋದಾಗರಿ, ರಾಜಶಾಹಿ, ಬಾಂಗ್ಲಾದೇಶ.
ಪೊಲೀಸರ ಪ್ರಕಾರ, ಈ ಎಂಟು ಮಂದಿ ಸುಮಾರು ಮೂರು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು. ಬಳಿಕ ಮುರ್ಷಿದಾಬಾದ್ ವಿಳಾಸ ಹೊಂದಿರುವ ಆಧಾರ್ ಕಾರ್ಡ್ಗಳ ಬಣ್ಣದ ಜೆರಾಕ್ಸ್ ಪ್ರತಿಗಳಿಗೆ ತಮ್ಮ ಭಾವಚಿತ್ರಗಳನ್ನು ಅಂಟಿಸಿ, ಅವುಗಳನ್ನು ಗುತ್ತಿಗೆದಾರರಿಗೆ ಸಲ್ಲಿಸಿ ಸುಮಾರು ಎರಡು ತಿಂಗಳಿನಿಂದ ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಪೊಲೀಸರು ಸ್ಪಷ್ಟಪಡಿಸಿರುವಂತೆ, ಪರಿಶೀಲನೆ ವೇಳೆ ಒಟ್ಟು 54 ಕಾರ್ಮಿಕರ ದಾಖಲೆಗಳನ್ನು ಮಾತ್ರ ಪರಿಶೀಲಿಸಲಾಗಿದ್ದು, ಎಲ್ಲರನ್ನೂ ಬಂಧಿಸಲಾಗಿಲ್ಲ. ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಎಂಟು ಮಂದಿಯ ರಾಷ್ಟ್ರೀಯ ಗುರುತಿನ ಚೀಟಿ (National ID Card), ಜನನ ಪ್ರಮಾಣಪತ್ರ ಹಾಗೂ ಕುಟುಂಬದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವರು ಬಾಂಗ್ಲಾದೇಶದ ಪ್ರಜೆಗಳು ಎಂಬುದು ದೃಢಪಟ್ಟಿದೆ. ಅಲ್ಲದೆ, ಮಾನ್ಯ ಪಾಸ್ಪೋರ್ಟ್ ಹಾಗೂ ವೀಸಾ ಇಲ್ಲದೆ ಅಕ್ರಮವಾಗಿ ಭಾರತದ ಗಡಿ ದಾಟಿ ಕೂಲಿ ಕೆಲಸಕ್ಕಾಗಿ ಬಂದಿರುವುದೂ ತನಿಖೆಯಿಂದ ತಿಳಿದುಬಂದಿದೆ.
ಈ ಕುರಿತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ), ಬೆಂಗಳೂರು ಅವರಿಗೆ ವರದಿ ಸಲ್ಲಿಸಲಾಗಿದೆ. ಎಫ್ಆರ್ಆರ್ಒ ನಿರ್ದೇಶನದಂತೆ, ಮುಂದಿನ ಕಾನೂನು ಕ್ರಮಕ್ಕಾಗಿ ಎಂಟು ಮಂದಿಯನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಅಗತ್ಯ ಪರಿಶೀಲನೆ ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಫ್ಆರ್ಆರ್ಒ ಅನುಸರಿಸುತ್ತಿರುವ ಪ್ರಮಾಣಿತ ಕಾರ್ಯವಿಧಾನದ (SOP) ಪ್ರಕಾರ ಅವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುವುದು.
ಈ ಪ್ರಕರಣದಲ್ಲಿ ಗುತ್ತಿಗೆದಾರರು ಅವರು ಅಕ್ರಮ ವಲಸಿಗರು ಎಂಬುದನ್ನು ತಿಳಿದಿದ್ದರೂ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ ಎಂಬುದಕ್ಕೆ ಇದುವರೆಗೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಗುತ್ತಿಗೆದಾರರಿಗೆ ಈ ಬಗ್ಗೆ ಪೂರ್ವಜ್ಞಾನವಿದ್ದದ್ದು ಸಾಬೀತಾದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಪೊಲೀಸ್ ಉಪನಿರೀಕ್ಷಕ ರಘು ನಾಯಕ್, ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಜೇಶ್ ಆಳ್ವ ಹಾಗೂ ಠಾಣೆಯ ಸಿಬ್ಬಂದಿಗಳಾದ ತಿರುಪತಿ ಅಲ್ಲೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.