ಮಂಗಳೂರು: ಉದ್ಯೋಗ ಮತ್ತು ಅಪ್ರೆಂಟಿಸ್ಷಿಪ್ ಮೇಳ
ಮಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶನದಂತೆ ಮಂಗಳೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪುರುಷ) ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ), ಮಂಗಳೂರು ಇಲ್ಲಿ ಉದ್ಯೋಗ ಮತ್ತು ಅಪ್ರೆಂಟಿಸ್ ಮೇಳವನ್ನು ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಸತೀಶ ಎ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಮತ್ತು ಅಪ್ರೆಂಟಿಸ್ ಮೇಳದ ಮಹತ್ವವನ್ನು ತಿಳಿಸುತ್ತಾ, ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಉದ್ಯೋಗಾಕಾಂಕ್ಷಿಗಳಿಗೆ ತಿಳಿಸಿದರು.
ಬೈಕಂಪಾಡಿ ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಎಂ ಡಿ ಪೂಜಾರಿ ಮಾತನಾಡಿ, ಮೇಳದ ಪ್ರಾಮುಖ್ಯತೆ ಬಗ್ಗೆ ವಿವರಿಸಿ, ಸ್ಥಳೀಯ ಉದ್ಯಮ ಸಂಸ್ಥೆಗಳು ಈಗಿನ ಸಂದರ್ಭಕ್ಕೆ ತಕ್ಕಂತೆ ತರಬೇತಿದಾರರನ್ನು ನೇಮಿಸಿಕೊಂಡು ಅವರಿಗೆ ಉಪಯುಕ್ತ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಿ ಆಯ್ಕೆಗೊಂಡ ಉದ್ಯಮ ಸಂಸ್ಥೆಗಳಲ್ಲಿ ಅವರನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳಲು ತಿಳಿಸಿದರು.
ಕೆಜಿಟಿಟಿಐ ನಿರ್ದೇಶಕ ಗಿರಿಧರ್ ಸಾಲಿಯಾನ್ ಮಾತನಾಡಿ, ತರಬೇತಿದಾರರು ಈಗಿನ ಪರಿಸ್ಥಿತಿಗೆ ತಕ್ಕಂತೆ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಾಫ್ಟ್ಸ್ಕಿಲ್ಸ್ಗಳನ್ನೂ ಸಹ ಮೈಗೂಡಿಸಿಕೊಳ್ಳುವುದು ಅತಿ ಅವಶ್ಯಕವೆಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಕಾರ್ಯಕ್ರಮದ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಉದ್ಯೋಗಾಧಿಕಾರಿ ಅರುಣ್ಕುಮಾರ್ ಹಿಪ್ಪರಗಿ, ವೇಣೂರು ಎಸ್.ಡಿ.ಎಂ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಮತ್ತಿತರರು ಇದ್ದರು.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ರಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ) ಪ್ರಾಚಾರ್ಯ ಶಿವಕುಮಾರ್ ಎಸ್ ಸ್ವಾಗತಿಸಿದರು. ತರಬೇತಿ ಅಧಿಕಾರಿ ಮಮತ ಎಲ್ ಎಸ್ ವಂದಿಸಿ, ಜೋಯ್ಲಿನ್ ಕ್ರಾಸ್ತಾ ನಿರೂಪಿಸಿದರು.
ಮೇಳದಲ್ಲಿ 53 ವಿವಿಧ ಉದ್ಯಮ ಸಂಸ್ಥೆಗಳು ಭಾಗವಹಿಸಿದ್ದವು. 500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ, ಇದರ ಪ್ರಯೋಜನ ಪಡೆದುಕೊಂಡರು. ಮೇಳದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪುರುಷ), ಮಂಗಳೂರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಾಲಾಡಿ, ಬೆಳ್ತಂಗಡಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ), ಮಂಗಳೂರು ಹಾಗೂ 8 ವಿವಿಧ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿದಾರರು ಭಾಗವಹಿಸಿದ್ದರು.
