ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ: ಎಐ ತಂತ್ರಜ್ಞಾನ ಪ್ರಯೋಗ, ನಿಷೇಧಿತ ವಸ್ತುಗಳ ತಡೆಗೆ ಕ್ರಮ
ಮಂಗಳೂರು: ಮಂಗಳೂರಿನಲ್ಲಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಂಗಳೂರು ಕಾರಾಗೃಹಕ್ಕೆ ಔಪಚಾರಿಕವಾಗಿ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳು ಇದ್ದು, ಅವುಗಳನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಮಂಗಳೂರು ಜೈಲು ಸೂಕ್ಷ್ಮ ಕಾರಾಗೃಹವಾಗಿದ್ದು, ಈಗಾಗಲೇ ಇಲ್ಲಿ ಹಲವು ಬಾರಿ ರೈಡ್ಗಳನ್ನು ನಡೆಸಲಾಗಿದೆ. ಜೈಲಿನೊಳಗೆ ಗಲಾಟೆ ನಡೆಸಿದ ಖೈದಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಕೆಲ ಖೈದಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.
ಒಳ್ಳೆಯ ನಡತೆ ಹೊಂದಿರುವ ಖೈದಿಗಳಿಗೆ ಸಹಕಾರ ನೀಡಲಾಗುತ್ತದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಜೈಲಿನೊಳಗೆ ನಿಷೇಧಿತ ವಸ್ತುಗಳು ಯಾವ ರೀತಿಯಲ್ಲಿ ಒಳಗೆ ಬರುತ್ತಿವೆ ಎಂಬುದರ ಕುರಿತು ಸಮಗ್ರವಾಗಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಜೈಲು ಭದ್ರತೆಗೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಟ್ರಯಲ್ ಬೇಸಿಸ್ನಲ್ಲಿ ಬಳಸಲಾಗುತ್ತಿದ್ದು, ಅದರ ಪರಿಣಾಮಕಾರಿತ್ವವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಪರಪ್ಪನ ಅಗ್ರಹಾರ ಮತ್ತು ಮೈಸೂರು ಜೈಲಿನಲ್ಲಿ ಈ ತಂತ್ರಜ್ಞಾನವನ್ನು ಪ್ರಯೋಗಾತ್ಮಕವಾಗಿ ಅಳವಡಿಸಲಾಗಿದೆ. ಅಗತ್ಯವಿದ್ದರೆ ಮಂಗಳೂರು ಜೈಲಿನಲ್ಲಿಯೂ ಟ್ರಯಲ್ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜೈಲುಗಳಲ್ಲಿ ಜಾಮರ್ ಸಮಸ್ಯೆ ಕಳೆದ 15 ವರ್ಷಗಳಿಂದ ಚರ್ಚೆಯಲ್ಲಿದ್ದು, ಕಾಲಕಾಲಕ್ಕೆ ಬದಲಾವಣೆಗಳಾಗಿವೆ. ಆದರೂ ಇನ್ನೂ ಕೆಲವು ಸಮಸ್ಯೆಗಳು ಉಳಿದಿವೆ ಎಂದು ಅವರು ಹೇಳಿದರು. ನಿನ್ನೆ ಮಂಗಳೂರು ಜೈಲಿನಲ್ಲಿ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ ಎಂದೂ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಪೊಲೀಸರು ಕೂಡ ಜೈಲುಗಳಿಗೆ ಭೇಟಿ ನೀಡಲಿದ್ದಾರೆ. ಜೈಲು ವ್ಯವಸ್ಥೆಯನ್ನು ಸರಿಯಾಗಿ ನಿಯಂತ್ರಿಸಿದರೆ ಶೇ.60ರಷ್ಟು ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ ಎಂದು ಡಿಜಿಪಿ ಹೇಳಿದರು. ದೊಡ್ಡ ಮಟ್ಟದ ಅಪರಾಧಗಳಲ್ಲಿ ತೊಡಗಿರುವವರು ಜೈಲಿಗೆ ಬರುತ್ತಾರೆ, ಜಾಮೀನಿನ ಮೇಲೆ ಹೊರಗೆ ಹೋಗುತ್ತಾರೆ. ಜೈಲಿನಲ್ಲಿರುವ ಅವಧಿಯಲ್ಲಿ ಸರಿಯಾದ ನಿಯಂತ್ರಣ ಇದ್ದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು
