
ಮಂಗಳೂರು: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ
ಮಂಗಳೂರು: ಬೇರೆ ಬೇರೆ ಕಡೆಯಿಂದ ಮಹಿಳೆಯರನ್ನು ಮತ್ತು ಯುವತಿಯರನ್ನು ಕರೆಯಿಸಿ ವೇಶ್ಯಾವಾಟಿಕೆ ಮಾಡುತ್ತಿದ್ದ ಮನೆಯೊಂದರ ಮೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಬಂಧಿಸಿ ಒರ್ವ ಸಂತ್ರಸ್ತ ಯುವತಿಯನ್ನು ರಕ್ಷಣೆ ಮಾಡಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆ ಉಳಿಯಾರ ಗೋಳಿ ನಿವಾಸಿ ಅಬ್ದುಲ್ ಹಫೀಸ್ (55) ಮತ್ತು ಕಾಟಿಪಳ್ಳ ಕೃಷ್ಣಾಪುರ ನಿವಾಸಿ ರಮ್ಲಾತ್ (46) ಎಂದು ಗುರುತಿಸಲಾಗಿದೆ.
ನವೆಂಬರ್ 25 ರಂದು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೂರು ಕಟ್ಟೆ ಪರಿಸರದ ಬಾಡಿಗೆ ಮನೆಯೊಂದರಲ್ಲಿ ಅಕ್ರಮ ಲಾಭ ಗಳಿಸುವ ಸಮಾನ ಉದ್ದೇಶದಿಂದ ಬೆಂಗಳೂರು , ಮಂಗಳೂರು, ಮೈಸೂರು, ಉಡುಪಿ ಹಾಗೂ ಇತರ ಕಡೆಗಳಲ್ಲಿನ ಯುವತಿಯರನ್ನು/ಮಹಿಳೆಯರನ್ನು ಮಾನವ ಕಳ್ಳಸಾಗಾಟ ಮೂಲಕ ಮಂಗಳೂರಿಗೆ ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಾರೆಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ದಲ್ಲಾಳಿಗಳಾದ ಅಬ್ದುಲ್ ಹಫೀಸ್ ಮತ್ತು ರಮ್ಲಾತ್ ಅವರನ್ನು ಬಂಧಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ನಿರತಳಾಗಿದ್ದ ಒಬ್ಬಳು ಸಂತ್ರಸ್ತೆ ಯುವತಿಯನ್ನು ರಕ್ಷಿಸಲಾಗಿದೆ.
ದಸ್ತಗಿರಿ ಮಾಡಿದ ಆರೋಪಿಗಳಿಂದ ರೂ. 10,060/- ನಗದು, 3 ಮೊಬೈಲ್ ಫೋನುಗಳು ಮತ್ತು ಸ್ಕಾರ್ಪಿಯೋ ಕಾರು ಹೀಗೆ ಒಟ್ಟು ರೂ. 3,25,560/- ಮೊತ್ತದ ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.