ಮಂಗಳೂರು| ಬಿ.ಸಿ.ರೋಡಿನಲ್ಲಿ ಯುವತಿಯನ್ನು ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆಯಾಗಲಿ : ಎಸ್. ಅಪ್ಪಿ
ಮಂಗಳೂರು : ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಯುವತಿಯನ್ನು ಹತ್ಯೆಗೈದ ಘಟನೆಯನ್ನು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ. ಪ್ರಕರಣದ ಆರೋಪಿಗೆ ಜಾಮೀನು ಸಿಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಮಾತ್ರವಲ್ಲದೆ ಸಾಕ್ಷ್ಯ ಇಲ್ಲ ಎಂದು ಬಿಡುಗಡೆಯೂ ಮಾಡಬಾರದು. ಆರೋಪಿಗೆ ಕಠಿನ ಶಿಕ್ಷೆ ಆಗುವಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದು ನಗರ ಅಧ್ಯಕ್ಷೆ ಎಸ್. ಅಪ್ಪಿ ಆಗ್ರಹಿಸಿದ್ದಾರೆ.
ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಾನೂನು ಅಷ್ಟು ಕಠಿನವಾಗಿಲ್ಲ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಕಾನೂನನ್ನು ಬಿಗು ಮಾಡುವ ಕೆಲಸ ಸರಕಾರಗಳು ಮಾಡಬೇಕು. ಮಹಿಳೆಯರು ನಿರ್ಭೀತಿಯಿಂದ ಇವರು ವಾತಾವರಣ ಸೃಷ್ಟಿಯಾಗಬೇಕು ಎಂದು ಒತ್ತಾಯಿಸಿದರು.
ಬಿ.ಸಿ.ರೋಡಿನ ಬಸ್ಸು ನಿಲ್ದಾಣದಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆಯಾಗುವುದರೊಂದಿಗೆ, ಸಿಸಿ ಕೆಮರಾಗಳನ್ನು ಅಳವಡಿಸಬೇಕು. ಹತ್ಯೆಯಾದ ಯುವತಿಯ ಕುಟುಂಬಕ್ಕೆ ಸರಕಾರ ಕೂಡಲೇ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಸೂಚಿಸಿದ್ದು, ಮಹಿಳಾ ಕಾಂಗ್ರೆಸ್ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು.
ಮಹಿಳಾ ಕಾಂಗ್ರೆಸ್ ನಾಯಕಿಯರಾದ ವೀಣಾ ಬೆನೆಡಿಕ್ಟ್, ಗೀತಾ ಪ್ರವೀಣ್, ಕಲಾ ಜ್ಯೋತಿ, ವೃಂದಾ, ಶಾಂತಲಾ ಗಟ್ಟಿ, ಚಂಚಲಾಕ್ಷಿ, ರೀಟಾ, ಸ್ವರೂಪಾ ಶೆಟ್ಟಿ, ಅಸ್ಮತ್ ಮೊದಲಾದವರಿದ್ದರು.
