ಮಂಗಳೂರು ಮನಪಾ ಕಚೇರಿಯ ಕಡತ ವಿಲೇವಾರಿಯಲ್ಲಿ ನ್ಯೂನತೆ: ಲೋಕಾಯುಕ್ತ ಪೊಲೀಸ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ಶನಿವಾರ ದಾಳಿ ನಡೆಸಿದ ಸಂದರ್ಭ ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಇಂಜಿನಿಯರ್ ವಿಭಾಗ, ಲೆಕ್ಕಪತ್ರ ವಿಭಾಗ, ನಗರ ಯೋಜನಾ ವಿಭಾಗ, ಆಯುಕ್ತರ ಕಚೇರಿಯ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನ್ಯತೆಗಳು ಕಂಡು ಬಂದಿದೆ ಎಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಪ್ರಕಟನೆ ತಿಳಿಸಿದೆ.
ಕಂದಾಯ ಮತ್ತು ನಗರ ಯೋಜನಾ ವಿಭಾಗದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಇದೆ. ಬ್ರೋಕರ್ ಒಬ್ಬರ ಬಳಿ 5 ಲಕ್ಷ ರೂ. ಹಣ ಪತ್ತೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿಯೊಬ್ಬರು ನಿವೃತ್ತರಾಗಿ 15 ವರ್ಷ ಕಳೆದರು ಕೂಡ ಈವರೆಗೆ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಿಗೆಯ ಕಡತಗಳು ಎಂಸಿಸಿ ಟ್ರೇಡ್ ಲೈಸನ್ಸ್ ವೆಬ್ಸೈಟ್ನಲ್ಲಿ ಬಾಕಿ ಇರುವುದು ಕಂಡುಬಂದಿದೆ. ವ್ಯಾಪಾರ ಪರವಾನಿಗೆಗಳನ್ನು ನವೀಕರಿಸಿಲ್ಲ. ಅದಕ್ಕೆ ಅನುಗುಣವಾದ ಶುಲ್ಕವನ್ನು ಸಂಗ್ರಹಿಸಿರುವುದಿಲ್ಲ. ಇಂಜಿನಿಯರ್ ವಿಭಾಗದ ಹಳೆಯ ಕಡತಗಳನ್ನು ಬಾಕಿ ಇರಿಸಿರುವುದು ಕಂಡು ಬಂದಿದೆ. ಲೆಕ್ಕಪತ್ರ ವಿಭಾಗದಲ್ಲಿ ಕಾಲಮಿತಿಯೊಳಗೆ ಬಿಲ್ಗಳನ್ನು ವಿಲೇವಾರಿಗೊಳಿಸದೆ ಬಾಕಿ ಇರಿಸುವುದು ಕಂಡುಬಂದಿದೆ ಎಂದು ತಿಳಿಸಿದೆ.
ನಗರ ಯೋಜನಾ ವಿಭಾಗದಲ್ಲಿ ಕಟ್ಟಡ ಪರವಾನಿಗೆ ನೀಡುವ ಸಮಯ ಯಾವುದೇ ನಿಬಂಧನೆಗಳನ್ನು ಪಾಲಿಸದೆ ಪರವಾನಿಗೆಯನ್ನು ನೀಡುತ್ತಿರುತ್ತಾರೆ. ಬಿಲ್ಡಿಂಗ್ ಬೈಲಾ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳಿಗೆ ಡೆಮೋಲೀಷನ್ ಆರ್ಡರ್ ಹೊರಡಿಸಿದ್ದರೂ ಟೌನ್ ಪ್ಲಾನಿಂಗ್ ವಿಭಾಗದ ಇಂಜಿನಿಯರ್ ಮತ್ತು ಆಯುಕ್ತರು ಬಿಲ್ಡಿಂಗ್ ಬೈಲಾ ನಿಯಮಗಳನ್ನು ಉಲ್ಲಂಪಿಸಿದ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡಿರುವುದಾಗಿ ಮಾಹಿತಿ ಇದೆ.
ನಗರದ ಒಳಚರಂಡಿ ಮೇಲುಸ್ತುವಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಒಳಚರಂಡಿ ವಿಭಾಗದ ಅಧಿಕಾರಿಗಳು ನಗರದ ರಾಜ ಕಾಲುವೆ, ತೋಡುಗಳಿಗೆ ಕಟ್ಟಡಗಳಿಂದ ನೀರು ಅನಧಿಕೃತವಾಗಿ ಹರಿಯಲು ಅವಕಾಶ ಮಾಡಿಕೊಟ್ಟಿ ದ್ದಾರೆ. ಅದರ ಉಲ್ಲಂಘನೆಯ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ಮಳೆಗಾಲದಲ್ಲಿ ಹಲವಾರು ಪ್ರದೇಶಗಳಲ್ಲ ಚರಂಡಿಯ ನೀರು ಜನವಸತಿ ಪ್ರದೇಶಗಳಿಗೆ ಹರಿದು ಹೋಗಿ ಅನಾರೋಗ್ಯಕರವಾದ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಮಾಹಿತಿ ಇದೆ. ಎಸ್ಟಿಪಿ ಮತ್ತು ವೆಟ್ವೆಲ್ಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ನಡೆಸದೆ ಅಸ್ತಿತ್ವದಲ್ಲಿರುವ ಯುಜಿಡಿ ನೆಟ್ವರ್ಕ್ಗೆ 25ಕ್ಕಿಂತ ಹೆಚ್ಚಿನ ಯುನಿಟ್ ಗಳಿರುವ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಿಂದ ಹೊರಬರುವ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಇಲ್ಲದೆ ಇದ್ದರೂ ಕೂಡ ಹಲವು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಿಗೆ ಎಸ್ಟಿಪಿ ನಿರ್ಮಿಸಲು ಒತ್ತಾಯಿಸದೆ ಅನುಮತಿ ನೀಡಿರುವ ಬಗ್ಗೆಯೂ ಮಾಹಿತಿ ಇದೆ.
ಕಟ್ಟಡ ನಿರ್ಮಾಣದ ವೇಳೆ ಯುಜಿಡಿಗೆ ಸಂಬಂಧಿಸಿದ ಷರತ್ತುಗಳನ್ನು ಪಾಲನೆ ಮಾಡಲು ಒತ್ತಾಯಿಸದೆ ನಿರ್ಲಕ್ಷತನ ತೋರಿದ ಪರಿಣಾಮ ನದಿಗಳ ಹಾಗೂ ತೋಡುಗಳ ಮಾಲಿನ್ಯತೆ ಹೆಚ್ಚಲು ಕಾರಣವಾಗಿದೆ. ಇವೆಲ್ಲದರ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಪ್ರಭಾರ ಅಧೀಕ್ಷಕ ಕುಮಾರಚಂದ್ರ ತಿಳಿಸಿದ್ದಾರೆ.