
ಮಂಗಳೂರು: ರಸ್ತೆಯಲ್ಲಿವೆ ಮರಣ ಗುಂಡಿಗಳು! ಸವಾರರಿಗೆ ಬಿದ್ದೆದ್ದು ಹೋಗುವ ಪರಿಸ್ಥಿತಿ
ಕಂಕನಾಡಿ ಜಂಕ್ಷನ್ನಲ್ಲಿ ಸರಿಯಿರುವ ರಸ್ತೆಗಿಂತ ಗುಂಡಿಗಳೇ ಹೆಚ್ಚು ಕಾಣಸಿಗುತ್ತಿದೆ, ಪಂಪ್ವೆಲ್ ಭಾಗದಿಂದ ಆಗಮಿಸುವ ಹಾಗೂ ತೆರಳುವ ರಸ್ತೆಯಲ್ಲಿ ಕೆಲವು ಕಡೆ ಗುಂಡಿಗಳಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಸಿಗ್ನಲ್ ದಾಟಿ ಬೆಂದೂರ್ ಕ್ರಾಸ್ನಲ್ಲಿಯೂ ರಸ್ತೆಯ ಎರಡು ಭಾಗದಲ್ಲಿ ಇಡೀ ರಸ್ತೆಯೇ ಗುಂಡಿಮಯವಾಗಿದೆ. ಅದರಲ್ಲೂ ಮಳೆ ಸಂದರ್ಭ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಗುಂಡಿಗಳ ಬಗ್ಗೆ ಗೊತ್ತಿಲ್ಲದೆ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಮಳೆ ಬರುವ ಮುಂಚೆ ರಸ್ತೆಗಳ ಪ್ಯಾಚ್ ವರ್ಕ್ ಮಾಡದ ಹಿನ್ನೆಲೆಯಲ್ಲಿ ಆಗ ಸಣ್ಣ ಪ್ರಮಾಣದಲ್ಲಿದ್ದ ಗುಂಡಿಗಳು ಮಳೆಯ ಕಾರಣದಿಂದ ಇದೀಗ ಬೃಹತ್ ಹೊಂಡಗಳಾಗಿದೆ. ಕೆಲವು ಕಡೆ ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿಯುತ್ತಿದೆ. ಪಂಪ್ವೆಲ್ನ ಸರ್ವೀಸ್ ರಸ್ತೆ, ಕಂಕನಾಡಿ, ಬಿಕರ್ನಕಟ್ಟೆ, ನಂತೂರು, ಕೂಳೂರು, ಬೆಂದೂರ್ವೆಲ್, ಕೆಪಿಟಿ, ಕೊಟ್ಟಾರ, ಪಡೀಲ್ ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಗೆ ಬಿದ್ದು ಜನಸಾಮಾನ್ಯರು ಪ್ರತಿದಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಪಂಪ್ವೆಲ್ನಿಂದ ತೊಕ್ಕೊಟ್ಟು ತೆರಳುವ ಹಾಗೂ ಆಗಮಿಸುವ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರವೇ ಕಷ್ಟಕರವಾಗಿದೆ. ಸರ್ವೀಸ್ ರಸ್ತೆಯ ಉಜ್ಜೋಡಿ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೇಗುಲದ ಸಮೀಪದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಸ್ಪೀಡ್ ಇದ್ದರೆ ಇಲ್ಲಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಇದೇ ಭಾಗದಲ್ಲಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ನೀರಿನಿಂದ ತುಂಬಿದ್ದ ಗುಂಡಿ ಗಮನಿಸದೇ ಬಿದ್ದು ಗಾಯಗೊಂಡಿದ್ದರು. ಇದೇ ಸಂದರ್ಭ ಹಿಂದಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಗಮನಿಸಿ ಬಸ್ಸನ್ನು ನಿಧಾನಗೊಳಿದ್ದಾನೆ. ಇದರಿಂದಾಗಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.
ಪಂಪ್ವೆಲ್ನ ಸರ್ವೀಸ್ ರಸ್ತೆ, ಕಂಕನಾಡಿ, ಬಿಕರ್ನಕಟ್ಟೆ, ನಂತೂರು, ಕೂಳೂರು, ಬೆಂದೂರ್ವೆಲ್, ಕೆಪಿಟಿ, ಕೊಟ್ಟಾರ, ಪಡೀಲ್ ರಸ್ತೆಯಲ್ಲಿರುವ ಗುಂಡಿಗಳಿಂದ ಹಲವು ಅಪಘಾತಗಳು ಪ್ರತಿನಿತ್ಯ ನಡೆಯುತ್ತಿದ್ದು ಹಲವರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆ ಸೇರಿದರೆ ಇನ್ನು ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚುವತ್ತ ಗಮನಹರಿಸಬೇಕಾಗಿದೆ. ಮಳೆಗಾಲ ಆಗಿರುವುದರಿಂದ ರಸ್ತೆಗುಂಡಿಗಳಿಂದ ಹಲವು ಸಮಸ್ಯೆಗಳಾಗುವ ಮುನ್ನ ಗಮನಹರಿಸಬೇಕಾಗಿದೆ.