ಮಂಗಳೂರು: ಸಹೋದರನ ನಿಧನದಿಂದ ಊರಿಗೆ ಬಂದಿದ್ದ ಅಕ್ಕನೂ ಅಪಘಾತದಲ್ಲಿ ದುರ್ಮರಣ
ಮಂಗಳೂರು: ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ಆಗಮಿಸಿದ್ದ ಯುವತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪಾವಂಜೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಕಾರು ಮತ್ತು ಆ್ಯಕ್ಟಿವಾ ನಡುವಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಂಗ್ರಕೂಳೂರು ನಿವಾಸಿ ಶ್ರುತಿ (27) ಅವರು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ ಶ್ರುತಿ ಅವರ ತಂದೆ ಗೋಪಾಲಾಚಾರ್ಯ (57) ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಹೊನ್ನಾವರದ ನಿವಾಸಿ ಪ್ರಶಾಂತ್ ಎಂಬಾತ ಅತಿವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಭಾಸ್ಕರ ಶೆಟ್ಟಿ ಎಂಬುವವರು ಮಣಿಪಾಲದಿಂದ ಕಾಸರಗೋಡಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಗೋಪಾಲಾಚಾರ್ಯ ಮತ್ತು ಶ್ರುತಿ ಮಳೆ ಬರುತ್ತಿದ್ದ ಕಾರಣ ಸೀಯಾಳ ಅಂಗಡಿಯ ಬಳಿ ರೈನ್ ಕೋಟ್ ಧರಿಸಲು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಗೋಪಾಲಾಚಾರ್ಯ ದಂಪತಿಗೆ ಶ್ರುತಿ ಮತ್ತು ಸುಜಿತ್ ಎಂಬ ಇಬ್ಬರೇ ಮಕ್ಕಳಿದ್ದರು. ಶ್ರುತಿ ಅವರ ಸಹೋದರ ಸುಜಿತ್ (24) ಜೂನ್ 10 ರಂದು ನಿಧನರಾಗಿದ್ದರು. ಅಕ್ಕನಾಗಿದ್ದ ಶ್ರುತಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಚೆನ್ನೈನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು. ಆಕೆ ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾವಂತೆಯಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.