
ಮಂಡ್ಯ: ಸಿಡಿಲು ಬಡಿದು ಡೈರಿಯ ಕಾರ್ಯದರ್ಶಿ ಸಾವು
ಮಂಡ್ಯ: ಮಳೆಗೆ ಮರದಡಿಯಲ್ಲಿ ಹೆಲ್ಮೆಟ್ ಹಾಕಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿ ಸಮೀಪದ ಹರಳಹಳ್ಳಿ ಸರ್ಕಲ್ ನಲ್ಲಿ ನಡೆದಿದೆ.
ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಧು (35) ಸಿಡಿಲಿಗೆ ಬಲಿಯಾದವರು. ಇವರು ಈತ ತನ್ನ ಪತ್ನಿಯನ್ನು ಮಳವಳ್ಳಿ ತಾಲ್ಲೂಕಿನ ಕಾಡುಕೊತ್ತನಹಳ್ಳಿ ಗ್ರಾಮಕ್ಕೆ ಬಿಟ್ಟು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಮಳೆ ಬಂದಿದೆ ಹೀಗಾಗಿ ಮಳೆ ನಿಂತ ಮೇಲೆ ಹೋಗೋಣವೆಂದು ಬೈಕನ್ನು ಒಂದು ಕಡೆ ನಿಲ್ಲಿಸಿ, ಹೆಲ್ಮೆಟ್ ಹಾಕಿಕೊಂಡೇ ಮರದ ಕೆಳಗೆ ಮೊಬೈಲ್ ನಲ್ಲಿ ಯಾರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಸಿಡಿಲು ಬಡಿದ ಪರಿಣಾಮ ಮಧು ಅವರಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಸಿಡಿಲು ಬಡಿದ ರಭಸಕ್ಕೆ ಮೊಬೈಲ್ ಜಖಂಗೊಂಡಿದೆ.
ಮೃತ ಮಧುಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು 9 ತಿಂಗಳ ಒಂದು ಹೆಣ್ಣು ಮಗುವಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕೆ.ಎಂ.ದೊಡ್ಡಿ ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.