
ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ನಟ ದರ್ಶನ್
ಹನೂರು: ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ನಟ ದರ್ಶನ್ ಅವರನ್ನು ಪ್ರಾಧಿಕಾರದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮಲೆ ಮಹದೇಶ್ವರ ಬೆಟ್ಟಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ, ಸ್ಥಳೀಯ ನಾಗರಿಕರು ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಮಾದಪ್ಪನ ಭಕ್ತರು, ದರ್ಶನ್ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು.
ಈ ಸಂದರ್ಭ ಅಭಿಮಾನಿಗಳು ದರ್ಶನ್ ಪರ ಜಯಘೋಷಣೆಗಳನ್ನು ಕೂಗಿ ತಮ್ಮ ಅಭಿಮಾನದ ಪರಕಾಷ್ಟೆಯನ್ನು ಮೆರೆದರು. ಈ ವೇಳೆ ದೇವಾಲಯದ ಸಿಬ್ಬಂದಿ ಹಾಗೂ ಪೊಲೀಸರು ಭಕ್ತರು, ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಇನ್ನು ಎರಡು ದಿನಗಳು ಅವರ ಜನ್ಮದಿನ ಆಚರಣೆ ಹಾಗೂ ಶಿವರಾತ್ರಿ ಜಾತ್ರೆ ಇರುವುದರಿಂದ ಇದಕ್ಕೂ ಮುನ್ನ ಭಕ್ತಾಧಿಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಮಲೆ ಮಾದಪ್ಪನ ದರ್ಶನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.