
ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿ ಗಳಿಗೆ ಆಯ್ಕೆ
ಬೆಂಗಳೂರು: ನಾಲ್ಕು ವರ್ಷಗಳ ಅವಧಿಯ “ಮಾಧ್ಯಮ ವಾರ್ಷಿಕ ಪ್ರಶಸ್ತಿ” ಮತ್ತು “ದತ್ತಿ ಪ್ರಶಸ್ತಿ’’ ಗೆ ನಾಡಿನ 124 ಮಂದಿ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಲ್ಕು ವರ್ಷಗಳ (2019, 2020, 2021 ಮತ್ತು 2022) ಮಾಧ್ಯಮ ವಾರ್ಷಿಕ ಪ್ರಶಸ್ತಿ” ಮತ್ತು “ದತ್ತಿ ಪ್ರಶಸ್ತಿ”ಗಳಿಗೆ ಆಯ್ಕೆ ಮಾಡಿದ್ದು, ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ರೂ.50ಸಾವಿರ ರೂ.ಗಳು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ನಾಲ್ಕು ವರ್ಷಗಳು ಸೇರಿ 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಸೇರಿ ಒಟ್ಟು 21 ಮಂದಿ ಪತ್ರಕರ್ತರನ್ನು “ದತ್ತಿ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ.
ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ‘ಆಂದೋಲನ ಪ್ರಶಸ್ತಿ’, ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ “ಅಭಿಮಾನಿ” ಮತ್ತು “ಅರಗಿಣಿ” ಪ್ರಶಸ್ತಿಗಳು, ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ “ಮೈಸೂರು ದಿಗಂತ” ಪ್ರಶಸ್ತಿ ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ “ಮೂಕನಾಯಕ ಪ್ರಶಸ್ತಿ” ಗೂ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಮೊತ್ತ ತಲಾ 10 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ನೆರವೇರಿಸಲು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರು ಹಾಗೂ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸದಾಶಿವ ಶೆಣೈ ಕೆ. ಅವರು ತಿಳಿಸಿದ್ದಾರೆ.