
ಮೈಸೂರಲ್ಲಿ ಎರಡೇ ಗಂಟೆಯಲ್ಲಿ ಸರಗಳ್ಳನ ಬಂಧನ
ಮೈಸೂರು: ಸರಗಳ್ಳತನ ಕೃತ್ಯ ನಡೆದ ಎರಡೇ ಗಂಟೆ ಅವಧಿಯಲ್ಲಿ ಸರಗಳ್ಳನನ್ನು ಬೆನ್ನತ್ತಿ ಹಿಡಿಯುವಲ್ಲಿ ಮೈಸೂರು ನಗರ ವಿವಿ ಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾದವಗಿರಿಯ ಹೊಟೇಲ್ ದಾಸ್ ಪ್ರಕಾಶ್ ಬಳಿ ಗುರುವಾರ ಬೆಳಗ್ಗೆ 7.30೦ರ ಸಮಯದಲ್ಲಿ ವೃದ್ದೆಯಿಂದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ 28 ವರ್ಷದ ಸರಗಳ್ಳನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕದ್ದ 65 ಗ್ರಾಂ ತೂಕದ ಚಿನ್ನದ ಸರವನ್ನು ಮಹಿಳೆಗೆ ಕೊಡಿಸಿದ್ದಾರೆ.
ಯಾದವಗಿರಿಯ ಲೇಟ್ ಶಾಂತಿಲಾಲ್ ಜೈನ್ ಅವರ ಪತ್ನಿ ಪುಷ್ಪಾದೇವಿ ಅವರು ವಾಯುವಿಹಾರಕ್ಕೆ ತೆರಳಿದ್ದು, ಈ ಸಮಯದಲ್ಲಿ ಬೈಕಿನಲ್ಲಿ ಬಂದ ಸರಗಳ್ಳ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ತಕ್ಷಣ ವಿಷಯ ತಿಳಿದು ಕಾರ್ಯಾಚರಣೆ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ಅದರಲ್ಲಿ ಬೈಕಿನ ನೋಂದಣಿ ಸಂಖ್ಯೆಯ ಮೂಲಕ ಆತನ ಮನೆ ವಿಳಾಸ ಪತ್ತೆ ಹಚ್ಚಿದ್ದಾರೆ. ವಿಜಯನಗರ ವಾಟರ ಟ್ಯಾಂಕ್ ಬಳಿ ನಿಂತಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತ ಫುಡ್ ಡೆಲವರಿ ಬಾಯ್ ಅಗಿ ಕೆಲಸ ಮಾಡುತ್ತಿದ್ದು, ಪ್ರೀತಿಸಿ ವಿವಾಹವಾಗಿದ್ದು, ಐಷಾರಾಮಿ ಜೀವನ ನಿರ್ವಹಣೆಗೆ ಸರಗಳ್ಳತನ ಕೃತ್ಯ ನಡೆಸಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಅಶ್ವಥನಾರಾಯಣ್ ನೇತೃತ್ವದಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಕುಮಾರ್.ಎಂ, ಎಸ್ಐಗಳಾದ ಕೆ.ಲೇಪಾಕ್ಷ, ಕೆ.ಕೆ.ಮೋಹನ್, ಸಿಬ್ಬಂದಿಗಳಾದ ಎಸ್.ಪ್ರಸನ್ನ, ರವಿಗೌಡ., ಪರಶುರಾಮ ರಾಥೋಡ, ಎಸ್.ಮಹೇಶ, ಜಿ.ಸುರೇಶ, ಎನ್.ವಿ.ಈರಣ್ಣ, ಬಿ.ಉಮೇಶ, ಸುನೀಲ್ ಕಾಂಬಳ್ಳೆ, ಪಿ.ಕುಮಾರ ಪತ್ತೆ ಕಾರ್ಯದಲ್ಲಿ ಇದ್ದರು.