
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಗಾಂಜಾ ವಶ
ಮೈಸೂರು: ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ, 20 ಗ್ರಾಂ ಗಾಂಜಾ, 15 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವದಲ್ಲಿ ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್.ಜಾಹ್ನವಿ ಸೇರಿದಂತೆ ಎಲ್ಲ ವಿಭಾಗದ ಎಸಿಪಿ, ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ಗಳು ಹಾಗೂ ಕಮಾಂಡೋ ಪಡೆ ಹಾಗೂ ಮಾದಕ ವಸ್ತು ಪತ್ತೆ ಹಚ್ಚುವ ಶ್ವಾನದಳದೊಂದಿಗೆ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಿದ್ದು, ಈ ವೇಳೆ ಜೈಲ್ ನಲ್ಲಿ ಗಾಂಜಾ, ನಗದು ಸೇರಿದಂತೆ ಚಮಚದಿಂದ ಮಾಡಿದ 8 ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತಂತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು, ಈ ಮಾರಕ ವಸ್ತುಗಳು ಎಲ್ಲಿಂದ ಜೈಲಿಗೆ ಸರಬರಾಜಾಗುತ್ತಿತ್ತು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಕಾರಾಗೃಹಕ್ಕೆ ಹೊಂದಿಕೊಂಡಿರುವ ಸ್ಮಶಾನದ ಕಡೆಯಿಂದ ಪೂರೈಕೆಯಾಗುತ್ತಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಜೈಲಿನಲ್ಲಿ ಮಾದಕವಸ್ತು, ಮೊಬೈಲ್ಗಳು ಸಿಗುವುದು ಗಂಭೀರ ವಿಷಯ. ಮೊಬೈಲ್ ಇದ್ದರೆ ಹೊರಗಿನವರಿಗೆ, ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡುತ್ತಾರೆ. ಹೀಗಾಗಿ ವಸ್ತುಗಳು ಹೇಗೆ ಬಂದಿವೆ, ಯಾರಾದರೂ ತಂದುಕೊಟ್ಟಿದ್ದಾರಾ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಗೆ ವರದಿ ನೀಡಲಾಗುವುದು ಎಂದರು.
ಇನ್ನೊಂದೆಡೆ ಭಿಕ್ಷಾಟನೆ ನೆಪದಲ್ಲಿ ನಾಗರಿಕರಿಂದ ಹಣ ವಸೂಲಿ ಮಾಡುತ್ತಿದ್ದ 8ಮಂದಿ ಆರೋಪಿಗಳನ್ನು ಹಾಗೂ 22 ತೃತೀಯ ಲಿಂಗಿ ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಪ್ರಮುಖ ವೃತ್ತಗಳು, ಟ್ರಾಫಿಕ್ ಸಿಗ್ನಲ್, ಪ್ರಮುಖ ಸ್ಥಳಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
8 ಮಂದಿಯನ್ನು ಎಚ್ಚರಿಕೆ ನೀಡಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. 22 ಮಂದಿ ತೃತೀಯ ಲಿಂಗಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.