
ಮೈಸೂರು: ಕೇರಳದಲ್ಲಿ ವೈದ್ಯ ಹತ್ಯೆ ಖಂಡಿಸಿ ಪ್ರತಿಭಟನೆ
ಮೈಸೂರು: ಕೇರಳದಲ್ಲಿ ನಡೆದ ಡಾ. ಡಾ ವಂದನಾ ದಾಸ್ ಹತ್ಯೆ ಮತ್ತು ವೈದ್ಯರ ಮೇಲೆ ಕ್ರಮವನ್ನು ಖಂಡಿಸಿ ಎಐಡಿಎಸ್ ಓ (AIDSO) ವಿದ್ಯಾರ್ಥಿ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿ ಕೇರಳ ಆರೋಗ್ಯ ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಎಐಡಿಎಸ್ ಓ ಜಿಲ್ಲಾಧ್ಯಕ್ಷರಾದ ಸುಭಾಷ್ ಮಾತನಾಡಿ, ಕೇರಳದ ಆರೋಗ್ಯ ಸಚಿವರ ಹಾಗೂ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯು ಅತ್ಯಂತ ಅಮಾನವೀಯವಾಗಿದೆ. ಈ ಕೂಡಲೇ ಅವರ ಬೇಜವಬ್ದಾರಿ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರಲ್ಲದೆ, ವೈದ್ಯರಿಗೆ ಅಗತ್ಯ ಸುರಕ್ಷಾ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಕೇರಳದ ಕೊಟ್ಟರಕರ್ ತಾಲೂಕಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಪೊಲೀಸರೊಂದಿಗೆ ಬಂದಿದ್ದ ಮಾದಕ ದ್ರವ್ಯ ಸೇವಿಸಿರುವ ವ್ಯಕ್ತಿಯು ಅಲ್ಲಿನ ವೈದ್ಯರ ಮೇಲೆ ಆಕ್ರಮಣ ಮಾಡಿದ್ದರಿಂದ ಡಾ ವಂದನಾ ದಾಸ್ ಹತ್ಯೆಗೊಳಗಾದ್ದಾರೆ. ಸರ್ಕಾರ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ಇಂತಹ ದುರ್ಘಟನೆ ನಡೆದಿದೆ. ಖೈದಿಯನ್ನು ಸಮರ್ಪಕ ರಕ್ಷಣೆಯಿಲ್ಲದೆ ಆಸ್ಪತ್ರೆಗೆ ಕರೆತರಲಾಗಿದೆ. ಖೈದಿಯು ಮಾದಕ ದ್ರವ್ಯ ಸೇವಿಸಿದ್ದಾಗಿಯೂ ಸಮರ್ಪಕ ರಕ್ಷಣೆ ನೀಡದೇ ವೈದ್ಯರ ನಡುವೆ ಬಿಟ್ಟು ವೈದ್ಯರನ್ನು ಅಪಾಯಕ್ಕೆ ತಳ್ಳಿರುವುದು ಪೊಲೀಸರ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ ಎಂದು ಆರೋಪಿಸಿದರು.
ಪೊಲೀಸರು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಆಗಿರುವ ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕಿತ್ತು ಬದಲಾಗಿ ಆರೋಗ್ಯ ಸಚಿವರು, ವೈದ್ಯೆ ಅನನುಭವಿಯಾಗಿದ್ದರಿಂದ ಇಂತಹ ಘಟನೆ ಜರುಗಿದೆ ಎಂಬ ಹೇಳಿಕೆ ನೀಡಿರುವುದು ವೈದ್ಯರ ಕುರಿತಾಗಿ ಸರ್ಕಾರದ ಧೋರಣೆ ಏನು ಎಂಬುದು ಗೊತ್ತಾಗುತ್ತಿದೆ.
ಕೂಡಲೇ ಆರೋಗ್ಯಮಂತ್ರಿಗಳು ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಸರ್ಕಾರವು ಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಬೇಕು. ವೈದ್ಯರಿಗೆ ರಕ್ಷಣೆ ಖಾತ್ರಿಪಡಿಸುವ ಸಂಪೂರ್ಣ ಜವಾಬ್ದಾರಿ ಸರ್ಕಾರ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ AIDSO ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಪದಾಧಿಕಾರಿಗಳಾದ ಸುಭಾಷ್, ಪುಷ್ಪ, ಹೇಮಾ ಚಂದ್ರಿಕಾ, ಹಾಗೂ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.