
ಮೈಸೂರು ದಸರಾ ವಸ್ತುಪ್ರದರ್ಶನ ಆರಂಭ
ಮೈಸೂರು: ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ದಸರಾ ವಸ್ತು ಪ್ರದರ್ಶನ ಆರಂಭಗೊಂಡಿದೆ. ಸುಮಾರು ಮೂರು ತಿಂಗಳ ಕಾಲ ನಡೆಯಲಿದ್ದು, ಈಗಷ್ಟೇ ಮಳಿಗೆಗಳು ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.
ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ., ಟೇಪು ಕತ್ತರಿಸಿ ಉದ್ಘಾಟಿಸಿದ್ದು, ಬಳಿಕ ಮಾತನಾಡಿದ ಅವರು, 90 ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬೇಕು. ಈ ಬಾರಿಯ ವಸ್ತು ಪ್ರದರ್ಶನ ಹಲವಾರು ವಿಶೇಷತೆಗಳಿಂದ ಕೂಡಿದೆ ಎಂದರು.
ವಸ್ತು ಪ್ರದರ್ಶನದಲ್ಲಿ ಮಕ್ಕಳ ಬಟ್ಟೆ ಮಳಿಗೆಗಳು, ಮಕ್ಕಳ ಆಟಿಕೆ ವಸ್ತುಗಳ ಮಳಿಗೆಗಳಲ್ಲಿ ಅರ್ಧ ಭರ್ತಿಯಾಗಿದ್ದರೆ, ಹಲವರು ಈಗ ಜೋಡಿಸುವ ಕೆಲಸ ಮಾಡುತ್ತಿದ್ದರು. ಮತ್ತೊಂದೆಡೆ ವಾಹನ ಪಾರ್ಕಿಂಗ್ ಗೇಟಿನ ಕಡೆ ಬರುವ ಇರುವ ಆಹಾರ ಮಳಿಗೆಗಳಲ್ಲಿ ಶೇ.20ರಷ್ಟು ಭರ್ತಿಯಾಗಿದ್ದರೆ, ಈಗ ತಮ್ಮ ಅಂಗಡಿಗಳಿಗೆ ಸಾಮಗ್ರಿಗಳನ್ನು ತುಂಬುತ್ತಿದ್ದರೆ, ನಾಮಫಲಕಗಳನ್ನು ಅಳವಡಿಸುತ್ತಿದ್ದು ಕಂಡುಬರುತ್ತಿದೆ. ಕೆಲವು ಮಳಿಗೆಗಳ ಕಾರ್ಯದಲ್ಲಿ ಕಲಾವಿದರು ಕಾರ್ಯೋನ್ಮುಖವಾಗಿದ್ದರು. ಪಿ.ಕಾಳಿಂಗರಾವ್ ಕಲಾಮಂಟಪದ ಸಮೀಪ ವಿದ್ಯುತ್ ದೀಪಾಲಂಕಾರ ಮಾಡಿದ್ದರೆ, ಮತ್ತೊಂದು ಕಡೆ ಪ್ರವಾಸಿಗರು ವಿಹರಿಸಲು ಹಾಕಿರುವ ಕುರ್ಚಿಗಳಿಗೆ ಸಿಂಗಾರ ಮಾಡಿದ್ದರಿಂದ ಗಮನ ಸೆಳೆಯುತ್ತಿವೆ . ಎಂ.ಜಿ.ರಸ್ತೆಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿ ಕೆಲವು ಸಜ್ಜಾಗಿದ್ದರೆ, ಹಲವು ಜೋಡಿಸಲಾಗುತ್ತಿದೆ.
ಈ ವೇಳೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಉಪ ಮಹಾಪೌರ ಡಾ.ಜಿ.ರೂಪಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಎಚ್.ಜಿ.ಗಿರಿಧರ್, ನಗರಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್, ಜಗದೀಶ್ ಮೊದಲಾದವರು ಇದ್ದರು.