ರಸ್ತೆ ವಿವಾದಕ್ಕೆ ಸಂಬಂಧಿಸಿ ಪರಸ್ಪರ ದೂರು: ಎರಡು ಪ್ರಕರಣ ದಾಖಲು
ಬಂಟ್ವಾಳ: ರಸ್ತೆ ಬಳಕೆ ವಿಚಾರವಾಗಿ ಉಳ್ಳಾಲ ಸಮೀಪದ ಚೇಳೂರು ಪ್ರದೇಶದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಇಬ್ಬರು ಪಕ್ಷಗಳ ನಡುವೆ ಪರಸ್ಪರ ದೂರು ದಾಖಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮೊದಲ ಪ್ರಕರಣದಲ್ಲಿ, ಪಿರ್ಯಾದಿದಾರರಾದ ಉಳ್ಳಾಲ ಚೇಳೂರು ನಿವಾಸಿ ಡಯಾನಾ ಜೆಸ್ಟಿನ್ ಡಿಸೋಜಾ (51) ಅವರ ದೂರಿನ ಪ್ರಕಾರ, ಮನೆಗೆ ಹೋಗುವ ರಸ್ತೆಯ ವಿಚಾರವಾಗಿ ಸ್ಥಳೀಯ ಚರ್ಚ್ನೊಂದಿಗೆ ತಕರಾರು ಇತ್ತು. ಮಾರ್ಚ್ 14, 2026ರಂದು ಚರ್ಚ್ಗೆ ಸಂಬಂಧಿಸಿದವರು ಜೆಸಿಬಿ ಯಂತ್ರದ ಮೂಲಕ ರಸ್ತೆ ಕಾಮಗಾರಿ ನಡೆಸಿ, ಪಿರ್ಯಾದಿದಾರರು ಮನೆಗೆ ಹೋಗದಂತೆ ರಸ್ತೆ ಬಂದ್ ಮಾಡಿರುವುದಾಗಿ ಆರೋಪಿಸಲಾಗಿದೆ.
ಈ ವೇಳೆ ಪಿರ್ಯಾದಿದಾರರು ಹಾಗೂ ಅವರ ಮಕ್ಕಳು ರಸ್ತೆ ಬಿಡುವಂತೆ ಕೇಳಿದಾಗ, ಆರೋಪಿಗಳಾದ ಜೆಸಿಂತಾ ಡಿಸೋಜಾ, ಜೆಸಿಂತಾ ಕ್ರಸ್ತಾ, ಅನಿಷಾ ಡಿಸೋಜಾ, ಹಿಲ್ಡಾ ಮೊಂತೇರೊ, ದೊರಾ ರೊಡ್ರಿಗಸ್, ಅಲೆನ್ ರೋಸ್ ಸೇರಿದಂತೆ ಇತರರು ಸೇರಿ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಗೊಂಡ ಡಯಾನಾ ಡಿಸೋಜಾ ಅವರು ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 37/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 189(2), 191(2), 115(2), 382, 351(2) r/w 190 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ಎರಡನೇ ಪ್ರಕರಣದಲ್ಲಿ, ಜೆಸಿಂತಾ ಡಿಸೋಜಾ (54) ಅವರು ನೀಡಿದ ದೂರಿನ ಪ್ರಕಾರ, ಅದೇ ದಿನ ಸಂಜೆ ಜೆಸಿಬಿ ಮೂಲಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಡಯಾನಾ ಡಿಸೋಜಾ ಅವರು ಕೆಲಸಕ್ಕೆ ಅಡ್ಡಿಪಡಿಸಿ, ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ವಿನಿಲ್ ಎಂಬಾತನು ಸಹ ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಲ್ಲೆಯಿಂದ ಗಾಯಗೊಂಡ ಜೆಸಿಂತಾ ಡಿಸೋಜಾ ಅವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 38/2026ರಲ್ಲಿ ಕಲಂ 352, 115(2), 118(1), 351(2) ಜೊತೆಗೆ 3(5) BNS ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಸದರಿ ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
