ರಾಮಮಂದಿರ ಕಾಣಿಕೆ ಹುಂಡಿ ಕಳವು ಪ್ರಕರಣಕ್ಕೂ ಪ್ರಧಾನಿ ಕಚೇರಿಗೂ ನೇರ ಸಂಬಂಧವಿದೆ : ಸುಧೀರ್ ಕುಮಾರ್ ಮರೋಳಿ
ಮಂಗಳೂರು : ರಾಮಮಂದಿರ ಕಾಣಿಕೆ ಹುಂಡಿ ಕಳವು ಪ್ರಕರಣಕ್ಕೂ ಪ್ರಧಾನಿ ಕಚೇರಿಗೂ ನೇರ ಸಂಬಂಧವಿದೆ. ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ಸುಧೀರ್ ಕುಮಾರ್ ಮರೋಳಿ ಆರೋಪಿಸಿದರು.
ಅವರು ಬುಧವಾವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಟ್ರಸ್ಟ್ ನಲ್ಲಿದ್ದವರೆಲ್ಲರೂ ಆರ್ ಎಸ್ ಎಸ್ ಮತ್ತು ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು. ಈ ತಂಡ ದೇವರ ಹಣ, ಬಂಗಾರ, ಬೆಳ್ಳಿ, ನಗದನ್ನು ಢಕಾಯಿತಿ ಮಾಡಿದೆ. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಪ್ರಧಾನಿ ನರೇಂದ್ರ ಮೋದಿಯವರನ್ನು ದೇವರಿಗೆ ಹೋಲಿಸಿದ್ದರು. ಉತ್ತರ ಪ್ರದೇಶ ಸರಕಾರ ರಚಿಸಿರುವ ಎಸ್ ಐ ಟಿ ಸಂಚುಕೋರರನ್ನು ರಕ್ಷಿಸುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಈಗ ಯಾಕೆ ಕೆಲಸ ಮಾಡುತ್ತಿಲ್ಲ? ಅದಕ್ಕೆ ಪೆಟ್ರೋಲ್, ಡೀಸೆಲ್ ಕೊರತೆಯಾಗಿದೆಯೇ? ರಾಮನ ಧಾರ್ಮಿಕ, ಪೌರಾಣಿಕ ಅಸ್ತಿತ್ವವನ್ನು ಕಾಂಗ್ರೆಸ್ ಯಾವತ್ತೂ ಅಲ್ಲಗಳೆದಿರಲಿಲ್ಲ. ಆದರೆ ಬಿಜೆಪಿಯವರು ಇತರ ರಾಜಕೀಯ ಪಕ್ಷಗಳನ್ನು ರಾಮನ ವಿರೋಧಿಗಳು ಎಂದು ಬಿಂಬಿಸಿದ್ದರು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ, ಮಹಮ್ಮದಾಲಿ, ಸುಭಾಶ್ಚಂದ್ರ ಶೆಟ್ಟಿ, ಟಿ.ಕೆ.ಸುಧೀರ್, ಶುಭೋದಯ ಆಳ್ವ, ಅಬ್ದುಲ್ ಸಲೀಂ, ಚೇತನ್ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
