
ರೈಲ್ವೆ ವ್ಯವಸ್ಥಾಪಕರಾಗಿ ಶಿಲ್ಪಿ ಅಗರ್ವಾಲ್ ಅಧಿಕಾರ ಸ್ವೀಕಾರ
ಮೈಸೂರು: ನೈರುತ್ಯ ರೈಲ್ವೆ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಶಿಲ್ಪಿ ಅಗರ್ವಾಲ್ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ರಾಹುಲ್ ಅಗರ್ವಾಲ್ ಅವರಿಂದ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಶಿಲ್ಪಿ ರೈಲ್ವೆ ಸಚಿವಾಲಯದ ನಿರ್ಮಾಣ ವಿಭಾಗವಾದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್ವಿಎನ್ಎಲ್) ಯೋಜನೆಯ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ (ಹಣಕಾಸು) ವಿಭಾಗದಲ್ಲಿ ಸಮೂಹ ಪ್ರಧಾನ ವ್ಯವಸ್ಥಾಪಕರಾಗಿದ್ದರು.
ಭಾರತೀಯ ರೈಲ್ವೆ ವಿತ್ತೀಯ ಸೇವೆಯ (ಐಆರ್ಎಎಸ್) 1993ರ ಬ್ಯಾಚ್ಗೆ ಸೇರಿದ ಶಿಲ್ಪಿ, ಲಕ್ನೋ ವಿಶ್ವವಿದ್ಯಾಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಮೂರು ದಶಕಗಳ ಅನುಭವವನ್ನು ಹೊಂದಿದ್ದು, ಉತ್ತರ ರೈಲ್ವೆ ಮತ್ತು ರೈಲ್ವೆ ಮಂಡಳಿಯ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಭಾರತೀಯ ರೈಲ್ವೆಯ ಬಹುತೇಕ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ನಿರ್ಮಾಣ, ಸಂಚಾರ, ಸಿಬ್ಬಂದಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿತ್ತೀಯ ಖಾತೆಯ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಉತ್ತರಾಖಂಡದ ಋಷಿಕೇಶ ಕರಣ್ಪ್ರಯಾಗ ಯೋಜನೆ (ಚಾರ್ ಧಾಮ್ ಯೋಜನೆ) ನಂತಹ ಸಂಕೀರ್ಣ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ತಂಡದ ಅಂಗವಾಗಿದ್ದರು. ಅನೇಕ ಜೋಡಿ ಮಾರ್ಗ ಮತ್ತು ರೈಲ್ವೆ ವಿದ್ಯುದ್ದೀಕರಣ ಯೋಜನೆಗಳಲ್ಲಿ ಪಾಲ್ಗೊಳ್ಳುವ ಜತೆಗೆ, ಆರ್ ವಿ ಎನ್ಎಲ್ ವ್ಯವಹಾರವನ್ನು ದೇಶದ ಹೊರಗೆ, ವಿಶೇಷವಾಗಿ ಮಾಲ್ಡೀವ್ಸ್ನಲ್ಲಿ ವಿಸ್ತರಿಸುವಲ್ಲಿ ಪ್ರಮುಖರಾಗಿದ್ದರು. 2010ರಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ರೈಲ್ವೆ ಸಚಿವರ ಪ್ರಶಸ್ತಿಗೆ ಭಾಜನರಾಗಿದ್ದಾರೆ.