
ವಿಜೃಂಭಣೆಯಿಂದ ಜರುಗಿದ ಶ್ರೀದುರ್ಗಾಪರಮೇಶ್ವರಿ ಬ್ರಹ್ಮರಥೋತ್ಸವ
ಸಾಲಿಗ್ರಾಮ: ಹಂಪಾಪುರ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವು ಮಂಗಳವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 12 ರಿಂದ 12-30ರವರೆಗೆ ನಡೆದ ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಕಾವೇರಿ ನದಿ ದಡದ ವ್ಯಾಘ್ರಪಾದ ಮಹಾಕ್ಷೇತ್ರದ ಪಾಲಶ್ರೀ ಪಂಪಾವಿರೂಪಾಕ್ಷ ಮತ್ತು ಪಂಪಾಪತಿ ಅಮ್ಮನವರ ಶ್ರೀಕ್ಷೇತ್ರದಲ್ಲಿ ಉದ್ಭವಮೂರ್ತಿಯಾಗಿ ದಕ್ಷಿಣಮುಖವಾಗಿ ಮಹಿಷಿವಾಹಿನಿಯಾಗಿ ಮೃತ್ಯುಂಜಯಿಯಾಗಿ ಕೋಟೆದುರ್ಗಿ ಎಂದೇ ಪ್ರಸಿದ್ದಿ ಪಡೆದಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾಧಿಗಳು ದೇವರಿಗೆ ಜೈಕಾರ ಹಾಕುತ್ತಾ ದೇವಾಲಯದ ಸುತ್ತಾ ಒಂದು ಸುತ್ತು ರಥವನ್ನು ಎಳೆದು ಕೃತಾರ್ಥರಾದರು.
ಕೃಷ್ಣರಾಜನಗರ ತಾಲೂಕಿನ ಹಂಪಾಪುರ, ಮಂಚನಹಳ್ಳಿ, ಬಡಕನಕೊಪ್ಪಲು, ಸನ್ಯಾಸಿಪುರ, ಈ ನಾಲ್ಕು ಗ್ರಾಮಗಳ ನೂರಾರು ಮಹಿಳೆಯರು ಹಾಗೂ ನೂತನ ನವದಂಪತಿಗಳು ಶ್ರದ್ದಾಭಕ್ತಿಯಿಂದ ಗ್ರಾಮದೇವತೆಗೆ ತಂಬಿಟ್ಟು ಆರತಿ ಎತ್ತಿ ಹಣ್ಣುಕಾಯಿ ನೈವೇದ್ಯೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು. ಯುವಕರು, ಯುವತಿಯರು ಹಾಗೂ ಭಕ್ತಾಧಿಗಳು ರಥದ ಮೇಲೆ ಹಣ್ಣುಧವನ ಎಸೆದು ಪ್ರಾರ್ಥಿಸಿದರೆ ಸರತಿ ಸಾಲಿನಲ್ಲಿ ನಿಂತ ಭಕ್ತಾಧಿಗಳು ದೇವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಹಾಗೂ ಪ್ರಸಾದ ಪಡೆದರು.
ರಥೋತ್ಸವದ ನಿಮಿತ್ತ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ, ಕೋಸುಂಬರಿ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗ್ರಾಮದ ವಿವಿಧ ಸಮಾಜದ ಮುಖಂಡರು ಮತ್ತು ವಿವಿಧ ರಾಜಕೀಯ ಪಕ್ಷದ ಧುರೀಣರು ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿದರು.