
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ ನೇತೃತ್ವದಲ್ಲಿ ಪ್ರತಿಭಟನೆ
ಕುಂದಾಪುರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ಕುಂದಾಪುರ ತಾಲ್ಲೂಕು ಘಟಕದ ನೇತೃತ್ವದಲ್ಲಿ ಗುರುವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಶಾಸ್ತ್ರಿ ಸರ್ಕಲ್ನಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಮಿನಿ ವಿಧಾನಸೌಧದಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು ಅವರ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಲಾಯಿತು.
ಇ.-ಶ್ರಮ್ ಗುರುತಿನ ಚೀಟಿ ನಿಡಬೇಕು. ಕೇರಳ ರಾಜ್ಯದಲ್ಲಿ ರಚಿಸಿರುವ ಕಾರ್ಮಿಕ ಕಲ್ಯಾಣ ಮಂಡಳಿ ಮಾದರಿಯಲ್ಲಿಯೇ ಖಾಸಗಿ ಕಾರ್ಮಿಕ ಕಲ್ಯಾಣ ಮಂಡಲಿ ರಚಿಸಬೇಕು. ಪಿಂಚಣಿ, ಇಎಸ್ಐ, ಪಿ.ಎಫ್, ಆಯುಷ್ಮಾನ್ ಭಾರತ್, ಅಪಘಾತ ವಿಮೆ, ನೈಸರ್ಗಿಕ ವಿಮೆ, ಆರೋಗ್ಯ ವಿಮೆ ಸೌಲಭ್ಯ ಒದಗಿಸಬೇಕು. ಹೆಚ್ಚಿಸಿರುವ ವಾಹನಗಳ ವಿಮಾ ದರವನ್ನು ಶೇ.50 ಕ್ಕೆ ಇಳಿಸಬೇಕು.ಕೇಂದ್ರ ಸರ್ಕಾರ ಪ್ರಾಸ್ತಾಪಿಸಿರುವ 714 ಜಿಓ ಜಾರಿಗೊಳಿಸಬಾರದು. ಸ್ಕ್ರಾಪ್ ವಾಹಗಳ ಬಳಕೆಯನ್ನು 20 ವರ್ಷಗಳಿಗೆ ಹೆಚ್ಚಿಸಬೇಕು. ಸ್ಕ್ರಾಪ್ ವಾಹಗಳ ಬದಲಿಗೆ ಹೊಸ ವಾಹನಗಳ ಖರೀದಿಯ ವೇಳೆ ಹೊಸ ವಾಹನದ ಮುಖ ಬೆಲೆಯ ಶೇ.50 ನ್ನು ಸಹಾಯಧನವಾಗಿ ನೀಡಬೇಕು. ಆಟೋ ಮೀಟರ್ ಬೆಲೆಯನ್ನು ಹೆಚ್ಚಿಸಬೇಕು. ತೈಲೋತ್ಪನ್ನಗಳ ಮೇಲೆ ಖಾಸಗಿ ಸಾರಿಗೆ ವಾಹನಗಳಿಗೆ ಸಬ್ಸಿಡಿ ನೀಡಬೇಕು. ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಸಾರಿಗೆ ಚಾಲಕರ ಅನೂಕೂಲಕ್ಕಾಗಿ ವಿಶ್ರಾಂತಿ ಗ್ರಹ ಹಾಗೂ ಸಬ್ಸಿಡಿ ಉಪಹಾರ ಕ್ಯಾಂಟೀನ್ ಸ್ಥಾಪಿಸಬೇಕು.ಎಂದು ಬೇಡಿಕೆಯ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿ ಮಂಗಳೂರು ಪ್ರಭಾರಿ ರಾಜೇಶ್ ಕಾವೇರಿ, ಭಾರತೀಯ ಮಜ್ದೂರ್ ಸಂಘದ ಕುಂದಾಪುರ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಸುರೇಶ್ ಪುತ್ರನ್, ಅಧ್ಯಕ್ಷ ಮಂಜುನಾಥ್ ಟಿ.ಟಿ ರಸ್ತೆ, ಗೌರವ ಸಲಹೆಗಾರ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ರವಿ ಪುತ್ರನ್, ಉಪಾಧ್ಯಕ್ಷರಾದ ಭಾಸ್ಕರ್ ಖಾರ್ವಿ, ಅಶೋಕ ಕೆರೆಕಟ್ಟೆ ಬಸ್ರೂರು, ಕೋಶಾಧಿಕಾರಿ ಶ್ರೀಧರ ಮೊಗವೀರ ಇದ್ದರು.