
ವಿಶ್ವಪ್ರಸನ್ನತೀರ್ಥಶ್ರೀಪಾದಂಗಳವರ 36ನೇ ಚಾತುರ್ಮಾಸ್ಯ ಆಚರಣೆ
ಮೈಸೂರು: ಯತಿವರೇಣ್ಯ ಸಮಾಜ ಸುಧಾರಕರೆಂದು ಹೆಸರುವಾಸಿಯಾದ ಪರಮಪೂಜ್ಯ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರಕರಕಮಲ ಸಂಜಾತರಾದ ಪೂಜ್ಯ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅವರ ಗುರುಗಳು ನಡೆದುಕೊಂಡು ಬಂದಿದ್ದ ದಾರಿಯಲ್ಲೇ ಸಾಗುತ್ತಿದ್ದು ಅದರಂತೆ ಈ ಬಾರಿ ಮೈಸೂರು ನಗರದಲ್ಲಿ 36ನೇ ಚಾತುರ್ಮಾಸ್ಯ ಆಚರಣೆ ನಡೆಯಲಿದೆ.
ಇದೇ ಜುಲೈ ತಿಂಗಳು 3ನೇ ತಾರೀಕು ಅಂದರೆ ಆಷಾಡ ಶುಕ್ಲಪಕ್ಷ ಹುಣ್ಣಿಮೆ ಯಿಂದ ಸೆಪ್ಟೆಂಬರ್ ತಿಂಗಳು 20ನೇ ತಾರೀಕು ಅಂದರೆ, ಭಾದ್ರಪದ ಶುಕ್ಲ ಚತುರ್ದಶಿಯವರೆಗೆ 90 ದಿನಗಳ ಚಾತುರ್ಮಾಸ್ಯ ವ್ರತವನ್ನು ಮೈಸೂರಿನ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಕೈಗೊಳ್ಳಲಿದ್ದಾರೆ.
ಈ ಸಂಬಂಧ ಜು.02ರ ಭಾನುವಾರ ಸಾಯಂಕಾಲ ಮೈಸೂರು ನಗರಕ್ಕೆ ಆಗಮಿಸಲಿರುವ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸರಸ್ವತಿ ಪುರಂನಲ್ಲಿರುವ ಅಗ್ನಿರಾಮಕ ದಳ ವೃತ್ತದಲ್ಲಿ ಸ್ವಾಗತಿಸಿ ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮಕ್ಕೆ ಸ್ವಾಗತಿಸಲಾಗವುದು. ಈ ಮೆರವಣಿಗೆಯಲ್ಲಿ ಮಂಗಳವಾದ್ಯ, ಚಂಡೆವಾದನ, ಭಕ್ತರಿಂದ ಭಜನೆ, ವೇದಘೋಷ ಮತ್ತು ಕೀಲುಕುದುರೆ, ಡೊಳ್ಳು ಕುಣಿತ, ಕಂಸಾಳೆ ಇತ್ಯಾದಿ ಕಲಾ ಪ್ರಾಕಾರಗಳು ಮೆರಗನ್ನು ನೀಡಲಿವೆ.
ಶ್ರೀ ಶ್ರೀಗಳನ್ನು ಶ್ರೀ ಕೃಷ್ಣಧಾಮದಲ್ಲಿ ಸ್ವಾಗತಿಸಿದ ಬಳಿಕ *ಶ್ರೀಕೃಷ್ಣ ಸಭಾ ಭವನದಲ್ಲಿ 5 ಗಂಟೆಯಿಂದ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ. ಶ್ರೀ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮವನ್ನು ಮೈಸೂರಿನ ಮಹಾರಜರಾದ ಯದುವೀರಕೃಷ್ಣದತ್ತಚಾಮರಾಜಒಡೆಯರ್ ರವರುಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ನೂತನವಾಗಿ ಚುನಾಯಿತರಾದ ಕೃಷ್ಣರಾಜಕ್ಷೇತ್ರದ ಶಾಸಕರಾದ ಶ್ರೀ ಟಿ. ಎಸ್, ಶ್ರೀವತ್ಸ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚಾಮರಾಜಕ್ಷೇತ್ರದ ಶಾಸಕರಾದ ಶ್ರೀ ಕೆ.ಹರೀರಗೌಡರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮೈಸೂರು ನಗರದ ಗಣ್ಯವ್ಯಕ್ತಿಗಳೆಲ್ಲಾ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪೂಜ್ಯ ಶ್ರೀಪಾದರು ಶ್ರೀ ಕೃಷ್ಣಧಾಮದಲ್ಲಿದ್ದುಕೊಂಡು ತಮ್ಮ ದೈನಂದಿನದ ವ್ಯಾಯಾಮ, ವಿದ್ಯಾರ್ಥಿಗಳಿಗೆ ಪಾಠ, ಜಪ, ತಪ, ಪೂಜೆಅಲ್ಲದೆ, ಬೆಳಗಿನ ಹೊತ್ತು ಭಕ್ತರ ಮನೆಗಳಿಗೆ ಪಾದಪೂಜೆಗಾಗಿ ತೆರಳುತ್ತಾರೆ. ಮಧ್ಯಾಹ್ನದ ಮಹಾ ಪೂಜೆಯ ನಂತರ ಭಿಕ್ಷೆ ಹಾಗೂ ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಲಿದ್ದಾರೆ. ಶ್ರೀ ಶ್ರೀಗಳು ಶ್ರೀ ಕೃಷ್ಣಧಾಮ ಮಾತ್ರವಲ್ಲದೆ ಜಯಲಕ್ಷ್ಮೀಪುರಂನ ರಾಯರಮಠ, ಉದಯಗಿರಿಯ ಶ್ರೀರಾಮಧಾಮ, ಜೆ.ಪಿ.ನಗರದ ವಿಠಲಧಾಮ, ಅಗ್ರಹಾರದ ಉತ್ತರಾಧಿಮಠ, ಉಡುಪಿ ಶ್ರೀ ಕೃಷ್ಣಮಂದಿರ, ಕೃಷ್ಣಮೂರ್ತಿಪುರಂನ ವ್ಯಾಸರಾಯ ಮಠ, ಚಾಮರಾಜರಸ್ತೆಯ ವೆಂಕಟಾಚಲಧಾಮ, ಟಿ.ಕೆ.ಲೇಔಟ್ನ ರಾಯರ ಮಠ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಆಸ್ಥಾನ ಪೂಜೆಯನ್ನು ಕೈಗೊಳ್ಳಲಿದ್ದಾರೆ.
ಶ್ರೀ ಶ್ರೀಗಳು ತಮ್ಮ 40ನೇ ಪರ್ವದಲ್ಲಿ ನಡೆಸುತ್ತಿರುವ ಈ ಚಾತುರ್ಮಾಸ್ಯ ವ್ರತದಲ್ಲಿ ದೇವರ ಪೂಜೆ, ಪ್ರವಚನಗಳಿಗೆ ಮಾತ್ರ ಸೀಮಿತಗೊಳಿಸದೆ, ಸಾಮಾಜಿಕ ಕಾರ್ಯಕ್ರಮಗಳನ್ನೂ ಕೂಡ ಭಾಗವಹಿಸಲಿದ್ದಾರೆ. ವಿವಿಧ ವಿದ್ಯಾಕೇಂದ್ರಗಳನ್ನು ಸಂದರ್ಶಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ, ದೀನ ದಲಿತರ ಕೇರಿಗಳ ಸಂದರ್ಶನ ಹಾಗೂ ಆಶೀರ್ವಚನ, ಆಸತ್ರೆ, ವೃದ್ಧಾಶ್ರಮ ಇತ್ಯಾದಿಗಳನ್ನು ಸಂದರ್ಶಿಸಿ ಹೆಣ್ಣು ಹಂಪಲು ವಿತರಣೆ ಮುಂತಾದ ಧರ್ಮ ಕಾರ್ಯಗಳನ್ನು ನಡೆಸಲಿದ್ದಾರೆ.
90 ದಿನಗಳ ಪರ್ಯಂತ ನಡೆಯುವ ಈ ಉತ್ಸವದಲ್ಲಿ ಪ್ರತೀದಿನ ಕೃಷ್ಣಧಾಮದಲ್ಲಿ ಸಾಯಂಕಾಲ 5 ರಿಂದ 8.30 ವರೆಗೆ ಭಜನೆ, ವಿದ್ವಾಂಸರಿಂದ ಭಾಗವತ ಪ್ರವಚನ, ಶ್ರೀ ಶ್ರೀಗಳಿಂದ ಸಮಗ್ರ ರಾಮಯಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೃಷ್ಣಧಾಮದಲ್ಲಿ 90 ದಿನಗಳ ಪರ್ಯಂತ ಪ್ರತೀ ದಿನ ಸಾಯಂಕಾಲ 5ಗಂಟೆಯಿಂದ 8ಗಂಟೆಯವರೆಗೆ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದ ವಿತರಣೆಯನ್ನು ಆಯೋಜಿಸಲಾಗಿದೆ.