ಶಕ್ತಿ ಯೋಜನೆ ಲಾಭವನ್ನು ಖಾಸಗಿ ಬಸ್ಸುಗಳಿಗೂ ವಿಸ್ತರಿಸಿದರೆ ಉಡುಪಿ ಜಿಲ್ಲೆಯ ಮಹಿಳೆಯರಿಗೆ ಅನುಕೂಲ – ಬಿ.ವೈ.ಆರ್

Spread the love

ಶಕ್ತಿ ಯೋಜನೆ ಲಾಭವನ್ನು ಖಾಸಗಿ ಬಸ್ಸುಗಳಿಗೂ ವಿಸ್ತರಿಸಿದರೆ ಉಡುಪಿ ಜಿಲ್ಲೆಯ ಮಹಿಳೆಯರಿಗೆ ಅನುಕೂಲ – ಬಿ.ವೈ.ಆರ್

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಸಂಖ್ಯೆ ತೀರಾ ಕಡಿಮೆಯಿದ್ದು ಶಕ್ತಿ ಯೋಜನೆಯ ಲಾಭ ಜಿಲ್ಲೆಯ ಮಹಿಳೆಯರಿಗೆ ದೊರೆಯುತ್ತಿಲ್ಲ. ಖಾಸಗಿ ಬಸ್ಸುಗಳಿಗೂ ಸಬ್ಸಿಡಿ ಒದಗಿಸಿದರೆ ಕರಾವಳಿಯ ಹೆಣ್ಣುಮಕ್ಕಳಿಗೆ ಅನುಕೂಲ ಮಾಡಿದಂತಾಗುವುದು. ಇಲ್ಲದಿದ್ದರೆ ಕೇವಲ ಪ್ರಚಾರದ ಜನೆಯಾಗುವುದು. ಮಹಿಳೆಯರಿಗೆ ಒಂದು ಕಡೆ ಹಣವನ್ನು ಕೊಟ್ಟಂತೆ ಮಾಡಿ ಟ್ಯಾಕ್ಸ್ ರೂಪದಲ್ಲಿ ಹಿಂಪಡೆಯುತ್ತಿದ್ದಾರೆ. ಇದು ತೋರಿಕೆಯ ಯೋಜನೆಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದರು.

ಅವರು ಬೈಂದೂರು ಮಿನಿವಿಧಾನಸೌಧ ಶಾಸಕರ ಕಛೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ 25 ಟವರ್ ಮಂಜೂರಾಗಿದ್ದು, ಇನ್ನೂ 25 ಟವರ್ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಮುಂಜೂರಾದ ಟವರ್ ನಿರ್ಮಾಣ ಕಾಮಗಾರಿ ಕೆಲವೆಡೆ ಪ್ರಗತಿಯಲ್ಲಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಭಾಕಿ ಉಳಿದೆಡೆ ಶೀಘ್ರ ಕಾಮಗಾರಿ ಆರಂಭಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮನೆ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದ ಸಂಸದರು, ಪೈಪ್ ಲೈನ್ ಅಳವಡಿಕೆ, ದುರಸ್ತಿ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಪೈಪ್ ಲೈನ್ ಕೊಂಡೊಯ್ಯುವ ಜಾಗದ ಕ್ಲಿಯರೆನ್ಸ್ ಮೊದಲಾದವುಗಳ ಬಗ್ಗೆ ತುರ್ತು ಕ್ರಮ ಕೈಗೊಂಡು ಕಾಮಗಾರಿ ತ್ವರಿತಗೊಳಿಸುವಂತೆ ಸೂಚಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಸರಿಯಾಗಿ ದೊರೆಯುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು ಕೂಡಲೇ ವ್ಯವಸ್ಥೆ ಸರಿಪಡಿಸುವುದು, ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತುಂಬಿಸಿಸುವುದು ಹಾಗೂ ಜನರಿಕ್ ಮೆಡಿಸಿಕ್ ಮಳಿಗೆ ಆಸ್ಪತ್ರೆ ಆವರಣದಲ್ಲಿಯೇ ತೆರೆಯುವ ಬಗ್ಗೆ ಸೂಚಿಸಿದರು.

ಹಿಂದಿನ ಬಿಜೆಪಿ ಸರಕಾರ ರೈತರಿಗೆ ನೀಡಿದ ಉಚಿತ ವಿದ್ಯುತ್ ಯೋಜನೆಯಂತೆ ಲೋಡ್ ಶೆಡ್ಡಿಂಗ್ ಮಾಡದೇ ವಿದ್ಯುತ್ ಒದಗಿಸಬೇಕು. ವಿದ್ಯುತ್ ಕೊರತೆ ಇದ್ದರೆ, ಬೇರೆ ರಾಜ್ಯದಿಂದಾದರೂ ಖರೀದಿಸಿ ನೀಡಲಿ. ರೈತರಿಗೆ ನೀರು, ವಿದ್ಯುತ್ ದೊರೆತರೆ ಯಾವುದೇ ಭಾಗ್ಯದ ಅವಶ್ಯಕತೆ ಇರುವುದಿಲ್ಲ ಎಂದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ತರಲಾಗಿದ್ದು, ಕೆಲವು ಕಾಮಗಾರಿಗಳು ಮುಗಿದ್ದರೇ, ಮಹತ್ವದ ಕಾಮಗಾರಿಗಳು ಪ್ರಗತಿಯಲ್ಲಿದೆ. ಆದರೆ ಈಗಿನ ಸರಕಾರದ ಅವಧಿಯಲ್ಲಿ ಕಾಮಗಾರಿಗಳು ಇನ್ನಷ್ಟು ವಿಳಂಬವಾಗುತ್ತಿದೆ. ಅನುದಾನದ ಹೊರತಾಗಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ ಎಂದರು.

ಬರಗಾಲ ಪೀಡಿತ ತಾಲೂಕನ್ನಾಗಿ ಘೋಷಿಸಬೇಕು: ಬಿವೈಆರ್
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮಳೆ ಕೊರತೆಯಿಂದಾಗಿ ಭತ್ತದ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ಒಣಗುತ್ತಿದೆ. ಹಾಗಾಗಿ ಬೈಂದೂರನ್ನು ಬರಗಾಲ ಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು ಶೀಘ್ರ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ, ಬಂದರು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಪ್ರಗತಿಯ ಬಗ್ಗೆ ಈ ವೇಳೆ ಚಿರ್ಚಿಸಿದರು.

ಸಭೆಯಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಇಓ ಭಾರತಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here