ಶಿರ್ವ| ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ – ಐವರು ಆರೋಪಿಗಳ ಬಂಧನ
ಉಡುಪಿ: ಬ್ಯಾಂಕ್ಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಅಡಮಾನ ಇಟ್ಟು ಸಾಲ ಪಡೆದ ವಂಚನೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಅಂಬಪಾಡಿ ಕಪ್ಪಟ್ಟು ನಿವಾಸಿ ಪುನೀತ್ ಆನಂದ ಕೋಟ್ಯಾನ್, ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ಸುದೀಪ್, ಏಣಗುಡ್ಡೆ ನಿವಾಸಿ ರಂಜನ್ ಕುಮಾರ್, ಪೆರ್ಡೂರು ನಿವಾಸಿ ಸರ್ವಜಿತ್ ಹೆಚ್ ಕೆ ಮತ್ತು ಮಹಾರಾಷ್ಟ್ರ ಪುಣೆ ನಿವಾಸಿ ರಾಜೇಶ್ ದಿಲೀಪ್ ಪಾಟೀಲ್ ಎಂದು ಗುರುತಿಸಲಾಗಿದೆ.
ದಿನಾಂಕ 30-10-2025 ರಂದು, ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿ ಶಾಖಾ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ, ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2025, 75/2025, 76/2025, 77/2025 ಅಡಿ ಕಲಂ 316(2), 318(4), 3(5) ಬಿ.ಎನ್.ಎಸ್ – 2023 ಪ್ರಕಾರ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ದೂರು ಪ್ರಕಾರ, ಆರೋಪಿತರು ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ತೋರಿಸಿ ಬ್ಯಾಂಕ್ನಲ್ಲಿ ಅಡಮಾನ ಇಟ್ಟು ಸಾಲ ಪಡೆದು ವಂಚನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಇಂತಹ ನಕಲಿ ಚಿನ್ನದ ಅಡಮಾನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ, ಉಡುಪಿ ವೃತ್ತ ನಿರೀಕ್ಷಕ ಕಾಪು ಅವರ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿ, ಬೆಂಗಳೂರು, ಗೋವಾ, ಮುಂಬೈ ಮತ್ತು ದೆಹಲಿಗಳಲ್ಲಿ ಹುಡುಕಾಟ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರು ಆರೋಪಿಗಳಿಂದ ₹4,30,000 ನಗದು, ನಕಲಿ ಹಾಲ್ಮಾರ್ಕ್ ಮಾಡಲು ಬಳಸಿದ ಲೇಸರ್ ಯಂತ್ರ ಹಾಗೂ ಕಂಪ್ಯೂಟರ್ ವಶಪಡಿಸಿಕೊಂಡಿದ್ದಾರೆ.
ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ತನಿಖೆಯ ವೇಳೆ ಆರೋಪಿತರು ಬ್ರಹ್ಮಾವರ, ಹಿರಿಯಡ್ಕ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ನಕಲಿ ಚಿನ್ನ ಅಡಮಾನ ವಂಚನೆ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿದೆ.
ಈ ಯಶಸ್ವಿ ಕಾರ್ಯಾಚರಣೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ (ಐಪಿಎಸ್) ಹಾಗೂ ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಶಿರ್ವ ಪಿಎಸ್ಐ ಮಂಜುನಾಥ ಮರಬದ, ಪಿಎಸ್ಐ ಲೋಹಿತ್ ಕುಮಾರ್ ಸಿ.ಎಸ್, ಪಡುಬಿದ್ರೆ ಪಿಎಸ್ಐ ಅನಿಲ್ಕುಮಾರ್ ಟಿ ನಾಯ್ಕ್, ಎಎಸ್ಐ ಶ್ರೀಧರ್ ಕೆ.ಜೆ. ಹಾಗೂ ಶಿರ್ವ ಮತ್ತು ಪಡುಬಿದ್ರೆ ಠಾಣಾ ಸಿಬ್ಬಂದಿ ಕಿಶೋರ್, ಮಂಜುನಾಥ, ಅರುಣ್, ಸಿದ್ದರಾಯಪ್ಪ, ನಾಗರಾಜ ಮತ್ತು ಸಿಹೆಚ್ಸಿ 68 ನಾಗರಾಜ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
