
ಸಾಮಾಜಿಕ ಜಾಲತಾಣದಲ್ಲಿ ಅತಿಯಾದ ದ್ವೇಷ ಪ್ರಸರಣವೇ ಫಾಸಿಲ್ ಹತ್ಯೆಗೆ ಕಾರಣ – ಲುಕ್ಮಾನ್ ಬಂಟ್ವಾಳ್
ಮಂಗಳೂರು: ಕಳೆದೆರಡು ದಿನಗಳಿಂದ ಮುಖ್ಯಮಂತ್ರಿ, ಗೃಹ ಸಚಿವ ಮತ್ತು ರಾಜಕೀಯ ನೇತಾರರ ಉದ್ರೇಕಕಾರಿ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಅತಿಯಾದ ದ್ವೇಷ ಪ್ರಸರಣವೇ ಈ ಹತ್ಯೆಗೆ ಮೂಲ ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಆರೋಪಿಸಿದ್ದಾರೆ.
ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಆಘಾತವನ್ನುಂಟು ಮಾಡಿದೆ. ಆಸ್ಪತ್ರೆಯಲ್ಲಿ ಕೋಮುದಾಹಿಗಳ ಕ್ರೌರ್ಯಕ್ಕೆ ಬಲಿಯಾದ ಫಾಜಿಲ್ ಅವರ ತಂದೆ ಸ್ಥಬ್ದರಾಗಿ ಕಲ್ಲಿನಂತೆ ನಿಂತಿದ್ದು ಮನ ಕಳುಕುವಂತಿತ್ತು.
ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಎರಡು ಹತ್ಯೆಗಳು ನಡೆದಿದ್ದರೂ ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಅದೂ ಸುರತ್ಕಲ್ ನಂತಹ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಅಸಡ್ಡೆ ತೋರಿದ್ದು ಖಂಡನೀಯ. ಪೊಲೀಸ್ ಇಲಾಖೆ ಯಾರದೇ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆದಷ್ಟು ಬೇಗ ನೈಜ ಕೊಲೆಗಡುಕರನ್ನು ಪತ್ತೆ ಹಚ್ಚಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.