
ಸುನೀಲ್ ಕುಮಾರ್ ದ್ವೇಷ ರಾಜಕೀಯದ ಬ್ರಾಂಡ್ ಅಂಬಾಸಿಡರ್ – ದೀಪಕ್ ಕೋಟ್ಯಾನ್
ಉಡುಪಿ: ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಅವ್ಯವಹಾರ ವಿಚಾರದಲ್ಲಿ ದನಿ ಎತ್ತಿದ ಸಾರ್ವಜನಿಕರನ್ನು ಅಭಿವೃದ್ದಿಗೆ ವಿರೋಧಿಗಳು ಹಾಗೂ ಇದರ ನೇತೃತ್ವ ವಹಿಸಿರುವ ನಾಯಕ ಉದಯ್ ಕುಮಾರ್ ಶೆಟ್ಟಿ ಎನ್ನುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ದ್ವೇಷ ರಾಜಕೀಯದ ಬ್ರಾಂಡ್ ಅಂಬಾಸಿಡರ್ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಲೂರು-ಎರ್ಲಪ್ಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಿದ ಪರಶುರಾಮ ಮೂರ್ತಿಯ ವಾಸ್ತವ್ಯ ವಿಚಾರ ಮರೆಮಾಚುವ ಪ್ರಯತ್ನವಾಗಿ ಶಾಸಕ ಸುನೀಲ್ ಕುಮಾರ್ ವಿಷಯಾಂತರ ಮಾಡುವುದರೊಂದಿಗೆ ನೂರಾರು ಬಾರಿ ಸುಳ್ಳನ್ನೇ ಸತ್ಯವನ್ನಾಗಿರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಕೀಯ ನಡೆಯಲಿ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿ ಅದನ್ನು ಜನರ ಮನದಲ್ಲಿ ಅಚ್ಚೊತ್ತುವಂತೆ ಮಾಡಿಕೊಂಡಿದ್ದಾರೆ.
ಬೈಲೂರು-ಎರ್ಲಪ್ಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಿದ ಪರಶುರಾಮ ಮೂರ್ತಿಯ ಸತ್ಯಾಸತ್ಯತೆ ಕುರಿತು ಸಾರ್ವಜನಿಕರು ಎತ್ತಿದ ಪ್ರಶ್ನೆಗೆ ಒರ್ವ ಜನಪ್ರತಿನಿಧಿಯಾಗಿ ಉದಯ್ ಕುಮಾರ್ ಶೆಟ್ಟಿ ಬೆಂಬಲಿಸಿದ್ದರೆ ತಪ್ಪೇನು? ತಾವು ಕ್ಷೇತ್ರದಲ್ಲಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುವ ಬದಲು ನೈಜ ವಿಚಾರ ಏನು ಎನ್ನುವುದನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಮಾಡಿ ಅದನ್ನು ಬಿಟ್ಟು ಕಾರ್ಕಳ ಕ್ಷೇತ್ರದ ಅಭಿವೃದ್ಧಿಯನ್ನು ತಡೆಯುತ್ತಿದ್ದಾರೆ ಎನ್ನುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಬೇಡಿ
ಕೋಟ್ಯಾಂತರ ವೆಚ್ಚ ಭರಿಸಿ ಮೂರ್ತಿ ಸಿದ್ಧಪಡಿಸಿದಾಗ ಯಾವುದೇ ಯೋಜನೆ ಯೋಚನೆ ಇಲ್ಲದೇ ಹೋಗಿರುವುದು ಹಾಗೂ ಪರಶುರಾಮ ಮೂರ್ತಿಯ ರಿಯಾಲಿಟಿ ಚೆಕ್ ನಡೆಸುವಂತೆ ನಾಗರಿಕರಿಂದ ಒತ್ತಡ ಹೆಚ್ಚುತ್ತಿದ್ದಂತೆ ಪರಶುರಾಮ ಮೂರ್ತಿ ಬಲಪಡಿಸುವ ಕುಂಟು ನೆಪ ಮುಂದಿಟ್ಟುಕೊಂಡು ಪರಶುರಾಮ ಮೂರ್ತಿಯನ್ನು ಬದಲಾಯಿಸುವ ಹುನ್ನಾರವನ್ನು ಸುನೀಲ್ ಕುಮಾರ್ ನಡೆಸುತ್ತಿದ್ದಾರೆ. ಕೂಡಲೇ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಶಾಸಕರು ಪರಶುರಾಮನ ಮೂರ್ತಿ ಅಸಲಿಯೋ ನಕಲಿಯೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ದೀಪಕ್ ಕೋಟ್ಯಾನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.