
ಸುರತ್ಕಲ್ ರಸ್ತೆ ಅಪಘಾತದಲ್ಲಿ ಕಟಪಾಡಿಯ ಮೂಡಬೆಟ್ಟು ದೇವಸ್ಥಾನದ ಅರ್ಚಕ ದುರ್ಮರಣ
ಮಂಗಳೂರು: ಸುರತ್ಕಲ್ ನಲ್ಲಿ ಲಾರಿ ಮಟ್ಟು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕಟಪಾಡಿ ಬಳಿಯ ಮಟ್ಟು ನಿವಾಸಿ, ದೇಗುಲದ ಅರ್ಚಕ ಅಕ್ಷಯ್ ಕೆ. ಆರ್ (33) ದುರ್ಮರಣ ಹೊಂದಿದ್ದಾರೆ.
ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದ ಅಕ್ಷಯ್ ಸುರತ್ಕಲ್ ನಲ್ಲಿ ಪೂಜೆ ಮುಗಿಸಿ ಕಟಪಾಡಿ ಗೆ ಹಿಂತಿರುಗಿ ಬರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ.
ಅಕ್ಷಯ್ ಅವರು ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟಪಾಡಿಯ ತನ್ನ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಸುರತ್ಕಲ್ ಗೋವಿಂದ ದಾಸ ಕಾಲೇಜು ಮುಂಭಾಗದಲ್ಲಿ ಲಾರಿಯ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.