ಸುರತ್ಕಲ್: ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿ ಸ್ಥಳದಲ್ಲೇ ಮೃತ್ಯು
ಸುರತ್ಕಲ್: ಹೈಟೆನ್ನನ್ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್ ನಲ್ಲಿ ಸೋಮವಾರ ಸಂಜೆ ವರದಿಯಾಗಿದೆ. ಮೃತರನ್ನು ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ ಭಾಸ್ಕರ ಎಂದು ತಿಳಿದು ಬಂದಿದೆ.
ಭಾಸ್ಕರ ಅವರು ಶೀಟ್ ಮೇಲ್ಟಾವಣಿ ಮಾಡುವ ಗುತ್ತಿಗೆದಾರನಾಗಿದ್ದು, ಕೃಷ್ಣಾಪುರ 6ನೇ ಬ್ಲಾಕ್ ನ ವಸತಿ ಸಮುಚ್ಚಯದ ತಗುಡು ಶೀಟ್ ನ ಮೇಲ್ಟಾವಣಿ ನಿರ್ಮಾಣಕ್ಕೆಂದು ಕಬ್ಬಿಣದ ರಾಡ್ ಮೂಲಕ ಅಳೆತೆ ತೆಗೆಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಬ್ಬಣದ ರಾಡ್ ನ್ನು ಕಂಕುಳಲ್ಲಿಟ್ಟುಕೊಂಡು ತಿರುಗುವಾಗ ಅಲ್ಲೇ ಪಕ್ಕದಲ್ಲಿದ್ದ ಹೈಟೆನ್ನನ್ ವಿದ್ಯುತ್ ವಯರ್ಗಳಿಗೆ ತಾಗಿದೆ. ಇದರಿಂದ ಅವರ ಮೇಲೆ ವಿದ್ಯುತ್ ಹರಿದು ಅವರು ಸ್ಥಳದಲ್ಲೇ ಮೃತಪಟ್ಟರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಭಾಸ್ಕರ ಅವರ ಮಗ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
